ನವದೆಹಲಿ, ಸೆ 30 (DaijiworldNews/DB): ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದಿಂದ ದಿಗ್ವಿಜಯ್ ಸಿಂಗ್ ಹಿಂದೆ ಸರಿದಿದ್ದು, ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ಚುನಾವಣೆಗೆ ಅಖಾಡ ಸಿದ್ದವಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸ್ಪರ್ಧೆ ಖಚಿತಗೊಂಡ ಹಿನ್ನೆಲೆಯಲ್ಲಿ ಮತ್ತು ಹೈಕಮಾಂಡ್ ಅಭ್ಯರ್ಥಿ ಖರ್ಗೆ ಅವರೇ ಆಗಿರುವ ಕಾರಣ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.
'ಭಿನ್ನಮತೀಯ' ಜಿ-23 ಗುಂಪಿನ ಸದಸ್ಯ ಶಶಿ ತರೂರ್ ಸ್ಪರ್ಧಾ ಕಣದಲ್ಲಿ ಉಳಿಯಲಿದ್ದು, ಖರ್ಗೆ ಮತ್ತು ತರೂರು ನಡುವೆ ನೇರ ಪೈಪೋಟಿ ನಡೆಯಲಿದೆ. ಇಂದು ಮಧ್ಯಾಹ್ನ 12 ಗಂಟೆ ಬಳಿಕ ಮಧ್ಯಾಹ್ನ 3 ಗಂಟೆಯ ಒಳಗೆ ಇಬ್ಬರೂ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ತರೂರ್ ಅವರೂ ನಾಮಪತ್ರ ಹಿಂತೆಗೆದುಕೊಂಡಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಲಿದೆ. ಇಲ್ಲವಾದಲ್ಲಿ ಅ. 17ರಂದು ಚುನಾವಣೆ ನಡೆಸುವುದು ಪಕ್ಷಕ್ಕೆ ಅನಿವಾರ್ಯವಾಗಲಿದೆ.
ಚುನಾವಣಾ ಕಣಕ್ಕಿಳಿಯುವುದಾಗಿ ನಿರ್ಧರಿಸಿದ್ದ ದಿಗ್ವಿಜಯ್ ಸಿಂಗ್ ನಿನ್ನೆಯಷ್ಟೇ ಎಐಸಿಸಿ ಕಚೇರಿಯಿಂದ ನಾಮಪತ್ರ ಪಡೆದುಕೊಂಡಿದ್ದರು. ಆದರೆ ಇಂದು ಬೆಳಗ್ಗೆ ಹಿರಿಯ ನಾಯಕ ಖರ್ಗೆ ಹಾಗೂ ಶಶಿ ತರೂರ್ ಅವರನ್ನು ಸಿಂಗ್ ಭೇಟಿಯಾಗಿದ್ದರು. ಬಳಿಕ ಗಾಂಧಿ ಕುಟುಂಬದ ಆಯ್ಕೆ ಖರ್ಗೆ ಎಂಬುದು ಖಚಿತವಾದ ನಂತರ ಸಿಂಗ್ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ದಿಗ್ವಿಜಯ ಸಿಂಗ್, ಕಾಂಗ್ರೆಸ್ಗಾಗಿ ಜೀವನಪೂರ್ತಿ ದುಡಿದಿದ್ದೇನೆ. ಮುಂದೆಯೂ ಅದೇ ದಾರಿಯಲ್ಲಿ ಸಾಗುತ್ತೇನೆ. ದಲಿತರು, ಆದಿವಾಸಿಗಳು, ಬಡವರ ಪರ ನಿಲ್ಲುವುದು, ಕೋಮು ಸೌಹಾರ್ದ ಕೆಡಿಸುವವರ ವಿರುದ್ದ ಹೋರಾಡುವುದು ನನ್ನ ಬದ್ದತೆ ಎಂದಿದ್ದಾರೆ.