ನವದೆಹಲಿ, ಸೆ 30 (DaijiworldNews/DB): ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವ ಸಾಧ್ಯತೆ ಇದ್ದು, ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಈ ಬಗ್ಗೆ ಶುಕ್ರವಾರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಕೇಂದ್ರ ಸಚಿವರಾಗಿ, ಎಂಟು ಬಾರಿ ಶಾಸಕ, ಎರಡು ಬಾರಿ ಸಂಸದರಾಗಿರುವ ಮತ್ತು ರಾಜಕೀಯದಲ್ಲಿ ಸಾಕಷ್ಟು ಅನುಭವವಿರುವ ಕಾರಣ ಹಾಗೂ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಕಾರಣ ವರಿಷ್ಠರಿಗೂ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗುವುದಕ್ಕೆ ಆಸಕ್ತಿ ಇದೆ ಎನ್ನಲಾಗುತ್ತಿದೆ. ಅಲ್ಲದೆ ಖರ್ಗೆ ಅವರಿಗೆ ಉನ್ನತ ಹುದ್ದೆ ನೀಡಿದರೆ ದಲಿತ ಸಮುದಾಯದ ಬೆಂಬಲ ಪಡೆಯಲೂ ಪಕ್ಷಕ್ಕೆ ವರವಾಗಲಿದೆ ಎಂದೂ ಹೇಳಲಾಗುತ್ತಿದೆ. ಇನ್ನು ಗಾಂಧಿ ಕುಟುಂಬದ ಆಪ್ತರಾಗಿರುವ ಕೆ.ಸಿ. ವೇಣುಗೋಪಾಲ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೈಕಮಾಂಡ್ ನಿರ್ಧಾರದ ಬಗ್ಗೆ ಗುರುವಾರ ರಾತ್ರಿ ಮಾಹಿತಿ ನೀಡಿದ್ದು ಚುನಾವಣೆಗೆ ತಯಾರಾಗುವಂತೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಆದರೆ ಖರ್ಗೆ ಅಧ್ಯಕ್ಷರಾದಲ್ಲಿ ಅವರು ರಾಜ್ಯಸಭೆ ವಿಪಕ್ಷ ನಾಯಕನ ಹುದ್ದೆ ತ್ಯಜಿಸುವುದು ಅನಿವಾರ್ಯವಾಗಲಿದೆ. ಇದು ಒಬ್ಬ ವ್ಯಕ್ತಿಗೆ ಒಂದು ಹುದ್ದೆ ನೀತಿಯನುಸಾರ ನಡೆಯಲಿದೆ. ಈ ನಡುವೆ ಶಶಿ ತರೂರು ಮತ್ತು ದಿಗ್ವಿಜಯ್ ಸಿಂಗ್ ಅವರೂ ಚುನಾವಣೆಗೆ ಸ್ಪರ್ಧಿಸಲಿದ್ದು, ಇಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದಿಂದ ಗುರುವಾರ ಹಿಂದೆ ಸರಿದಿದ್ದಾರೆ.