ನವದೆಹಲಿ, ಸೆ 30 (DaijiworldNews/MS): ದೇಶದಲ್ಲಿ ಕಳೆದ ಎಂಟು ವರ್ಷಗಳಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ವೈಫಲ್ಯದ ಬಗ್ಗೆ ಲೇವಡಿ ಮಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ’ಗಾಂಧಿ ಕುಟುಂಬ ಅವಧಿ ಮೀರಿದ ಔಷಧಿ ಇದ್ದಂತೆ’ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ನೇತೃತ್ವದಲ್ಲಿ ಬಿಜೆಪಿ ಜಯ ಸಾಧಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಇನ್ನೂ ತಾವೂ ’ಆಡಳಿತ ಪಕ್ಷ ’ವಾಗಿಯೇ ಇದ್ದೇವೆ ಎಂಬ ಭ್ರಮೆಯಲ್ಲಿದ್ದು , ಆದರೆ ಆಡಳಿತವನ್ನು ಬಿಜೆಪಿ ವಶಕ್ಕೆ ಪಡೆದಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳಿಗೆ ಸ್ಥಾನವಿದ್ದು, ಅದಕ್ಕಾಗಿ ಅಂತರ್ಗತ ವ್ಯವಸ್ಥೆ ಇದೆ. ಆದರೆ ಗಾಂಧಿ ಕುಟುಂಬವನ್ನು ವಿರೋಧ ಪಕ್ಷದ ಹೆಸರಿನಲ್ಲಿ ನೋಡಬೇಡಿ, ಅವು "ಅವಧಿ ಮೀರಿದ ಔಷಧಿ"ಗಳಾಗಿವೆ ಎಂದು ಹೇಳಿದ್ದಾರೆ.
ಪ್ರಧಾನಿ ಹುದ್ದೆ ತಮ್ಮ ಕುಟುಂಬಕ್ಕೆ ಸೇರಿದ್ದು ಎಂದು ಕಾಗ್ರೆಸ್ ಭಾವಿಸಿದೆ. ಹಾಗಾಗಿ ಇನ್ಮುಂದೆ ಕಾಂಗ್ರೆಸ್ಸಿಗರು ದೀರ್ಘ ಕಾಲ ವಿರೋಧ ಪಕ್ಷದ ಸ್ಥಾನದಲ್ಲೇ ಇರಲಿದ್ದಾರೆ' ಎಂದು ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 356ನೇ ವಿಧಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಕುಟುಂಬಕ್ಕೆ ದೊಡ್ಡ ಸವಾಲಾಗಿದ್ದಾರೆ ಎಂದು ಹೇಳಿದ್ದಾರೆ.