ಗುಂಡ್ಲುಪೇಟೆ, ಸೆ 29 (DaijiworldNews/MS): ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತ್ ಜೋಡೊ ಯಾತ್ರೆ ಸಂಬಂಧ ನಾಯಕರಿಗೆ ಸ್ವಾಗತ ಕೋರಲು ಅಳವಡಿಕೆ ಮಾಡಿದ್ದ ಫ್ಲೆಕ್ಸ್ ಗಳನ್ನೂ ಕಿಡಿಗೇಡಿಗಳು ರಾತ್ರೋರಾತ್ರಿ ಹರಿದು ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನು ಈ ಬಗ್ಗೆ ಕಾಂಗ್ರೆಸ್ ಘಟಕವೂ ಟ್ವೀಟ್ ಮಾಡಿದ್ದು, ಬಿಜೆಪಿಗೆ ಎಂದೂ ಜೋಡಿಸುವುದು, ಕಟ್ಟುವುದು ತಿಳಿದಿಲ್ಲ, ಅವರದ್ದೇನಿದ್ದರೂ ಒಡೆಯುವ, ಕೆಡವುವ ಸಂಸ್ಕೃತಿ. ಭಾರತ್ ಜೋಡೋ ಯಾತ್ರೆಯ ಯಶಸ್ಸನ್ನು ಸಹಿಸದ ಬಿಜೆಪಿ ಹತಾಶ ಸ್ಥಿತಿಗೆ ತಲುಪಿ ತನ್ನೊಳಗಿನ ಸ್ಯಾಡಿಸ್ಟ್ ಮನಸ್ಥಿತಿಯನ್ನು ಬ್ಯಾನರ್ಗಳ ಮೇಲೆ ತೋರಿಸುತ್ತಿದೆ.ಕೈಲಾಗದವರು ಮೈ ಪರಚಿಕೊಳ್ಳುವುದು ಎಂದರೆ ಇದೇ ಅಲ್ಲವೇ ಎಂದು ಬಿಜೆಪಿಯ ಟ್ವಿಟರ್ ಖಾತೆಯನ್ನು ಕಾಂಗ್ರೆಸ್ ಟ್ಯಾಗ್ ಮಾಡಿದೆ.
ಗುಂಡ್ಲಪೇಟೆ ಊಟಿ ಸರ್ಕಲ್ ನಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಅದರ ಎರಡು ಬದಿಯಲ್ಲಿ ಅಳವಡಿಕೆ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರ ನಾಯಕರ 40ಕ್ಕೂ ಅಧಿಕ ಫ್ಲೇಕ್ಸ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಕಾಂಗ್ರೆಸ್ ಬಿಜೆಪಿ ಕಡೆ ಬೊಟ್ಟು ಮಾಡಿದ್ದು, ಆದರೆ ಇದನ್ನು ಬಿಜೆಪಿ ಅಲ್ಲಗಳೆದಿದ್ದು, "ಪ್ರಚಾರಕ್ಕಾಗಿ ಕಾಂಗ್ರೆಸ್ನವರೇ ಮಾಡಿರುವ ಸಾಧ್ಯತೆ ಇದೆ" ಎಂದು ಪ್ರತ್ಯಾರೋಪ ಮಾಡಿದ್ದಾರೆ.