ನವದೆಹಲಿ, ಸೆ 27 (DaijiworldNews/MS): ರಾಜಸ್ಥಾನದಲ್ಲಿ ಸಿಎಂ ಪಟ್ಟಕ್ಕಾಗಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಹಾಗೂ ಕಾಂಗ್ರೆಸ್ ಶಾಸಕರ ನಡುವಿನ ಜಟಾಪಟಿ ನಡೆಯುತ್ತಿರುವ ನಡುವೆ, ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ರೇಸ್ನಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
ಉತ್ತರಾಧಿಕಾರಿ ವಿಚಾರದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಅವರ ವರ್ತನೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನಗೊಂಡಿದ್ದು, ಎಐಸಿಸಿ ಅಧ್ಯಕ್ಷ ಗಾದಿಯಲ್ಲಿ ಮುಕುಲ್ ವಾಸ್ನಿಕ್, ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್, ಕೆಸಿ ವೇಣುಗೋಪಾಲ್ ಅವರ ಹೆಸರು ಮುಂಚೂಣಿಗೆ ಬಂದಿದೆ ಎಂದು ವರದಿಯಾಗಿದೆ.
ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಬಾರದು ಎಂದು ಗೆಹ್ಲೋಟ್ ಬಣದ 92 ಶಾಸಕರು ಪಟ್ಟು ಹಿಡಿದಿದ್ದರು. ಭಾನುವಾರ ರಾತ್ರಿ ಆರಂಭವಾದ ಈ ಡ್ರಾಮಾ ಮುಂದುವರಿದಿದೆ, ಇದು ಕೈ ಹೈಕಮಾಂಡ್ ಸಿಟ್ಟಿಗೆ ಕಾರಣವಾಗಿದೆ. ಹೀಗಾಗಿ ಸೋಮವಾರ ಸೋನಿಯಾ ನಿವಾಸದಲ್ಲಿ ಪ್ರಿಯಾಂಕಾ ವಾದ್ರಾ, ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಕಮಲ್ನಾಥ್, ಅಜಯ ಮಕೇನ್ ಸಭೆ ನಡೆಸಿದ್ದು , ವಾಸ್ನಿಕ್, ಖರ್ಗೆ, ದಿಗ್ವಿಜಯ್, ವೇಣುಗೋಪಾಲ್ ಇವರಲ್ಲಿ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಹೈಕಮಾಂಡ್ ಉತ್ಸುಕವಾಗಿದೆ ಎಂದು ಹೇಳಲಾಗಿದೆ.