ಬೆಂಗಳೂರು, ಸೆ 26 (DaijiworldNews/MS): ’PayCM' ಅಭಿಯಾನ ಬೊಮ್ಮಾಯಿ ನೇತೃತ್ವದ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಳಚುವ ಪೋಸ್ಟರ್ ಹೊರತು ಇದಕ್ಕೆ ಇನ್ನೇನೋ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ದಿನೇಶ್ ಗುಂಡುರಾವ್ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿಯವರು ಈ ಅಭಿಯಾನವನ್ನು ಲಿಂಗಾಯತ ವಿರೋಧಿ ಎಂದು ಬ್ರ್ಯಾಂಡ್ ಮಾಡುತ್ತಿರುವುದು ಹತಾಶ ಮನಃಸ್ಥಿತಿಯ ಪ್ರತೀಕ. 'PayCM' ಅಭಿಯಾನ ಅದ್ಹೇಗೆ ಲಿಂಗಾಯತ ವಿರೋಧಿ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.
"ಬೊಮ್ಮಾಯಿ ವಿರುದ್ಧದ 'PayCM' ಅಭಿಯಾನವನ್ನು ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸಿ BJP, ಸತ್ಯವನ್ನು ಡೈವರ್ಟ್ ಮಾಡುತ್ತಿದೆ. ಆದರೆ ಬಿಜೆಪಿಯವರಷ್ಟು ಲಿಂಗಾಯತ ವಿರೋಧಿಗಳು ಯಾರಿದ್ದಾರೆ? ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪರನ್ನು ಸಿಎಂ ಪದವಿಯಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ್ದು ಲಿಂಗಾಯತ ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೆ "ಎಂದು ಕುಟುಕಿದ್ದಾರೆ.
ಬೊಮ್ಮಾಯಿ ಸರ್ಕಾರದ ಮೇಲಿರೋ ಭ್ರಷ್ಟಾಚಾರದ ಕಳಂಕದಿಂದ ಲಿಂಗಾಯತ ಮತಗಳು ಕೈ ತಪ್ಪಿ ಹೋಗುವ ಆತಂಕ ಬಿಜೆಪಿಯವರನ್ನು ಕಾಡುತ್ತಿದೆ. ಹಾಗಾಗಿ ಬೊಮ್ಮಾಯಿಯವರ ಲಿಂಗಾಯತ ಕಾರ್ಡ್ ಬಳಸಿ ಅನುಕಂಪ ಗಿಟ್ಟಿಸುವ ಕೀಳು ತಂತ್ರಕ್ಕೆ ಬಿಜೆಪಿ ಮುಂದಾಗಿದೆ.
ಭ್ರಷ್ಟಚಾರಿಗಳಿಗೆ ಯಾವುದೇ ಜಾತಿ-ಸಮೂದಾಯ ಇರುವುದಿಲ್ಲ. ಭ್ರಷ್ಟರದ್ದೇ ಒಂದು ಜಾತಿ.ಅದರ ಹೆಸರೇ ಬಿಜೆಪಿ. ಹಾಗದ್ರೆ ಬಿಜೆಪಿಯ ಲಾಜಿಕ್ ಏನು ಎಂದು ಕೇಳಿದ್ದಾರೆ.