ನವದೆಹಲಿ, ಸೆ 23 (DaijiworldNews/DB): ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ಆರಂಭಿಸಿದ ಕೆಲಸಗಳನ್ನು ಈಗ ನಾವು ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನಲ್ಲಿ ನಡೆದ ಪರಿಸರ ಸಚಿವರ ಸಮಾವೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ನಗರ ನಕ್ಸಲರು ಮತ್ತು ಅಭಿವೃದ್ದಿ ವಿರೋಧಿ ಶಕ್ತಿಗಳು ರಾಜಕೀಯ ಬೆಂಬಲದೊಂದಿಗೆ ದೇಶದ ಅಭಿವೃದ್ದಿಯನ್ನು ತಡೆಯುತ್ತಿವೆ. ಅದರಲ್ಲಿ ಗುಜರಾತ್ನ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲುದ್ದೇಶಿಸಿದ್ದ ಸರ್ದಾರ್ ಸರೋವರ್ ಅಣೆಕಟ್ಟು ಕೂಡಾ ಒಂದು. ಸ್ವಾತಂತ್ರ್ಯಾನಂತರ ನೆಹರೂ ಅವರು ಈ ಅಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರಾದರೂ, ನಗರ ನಕ್ಸಲರು, ಅಭಿವೃದ್ದಿ ವಿರೋಧಿಗಳು ಇದನ್ನು ಪರಿಸರ ವಿರೋಧಿ ಯೋಜನೆ ಎಂದು ಸುಳ್ಳು ಪ್ರಚಾರ ಮಾಡಿ ತಡೆದರು. ಆದರೆ ನಾನು ಪ್ರಧಾನಿಯಾದ ಬಳಿಕ ಈ ಯೋಜನೆಯನ್ನು ಪೂರ್ಣಗೊಳಿಸಿದೆ ಎಂದರು.
ಆಧುನಿಕ ಮೂಲಸೌಕರ್ಯಗಳು ಅಭಿವೃದ್ದಿಯಾದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಆದರೆ ಪರಿಸರ ಅನುಮತಿಯ ಹೆಸರಿನಲ್ಲಿ ಮೂಲ ಸೌಕರ್ಯ ನಿರ್ಮಾಣವು ಸಿಕ್ಕಿಹಾಕಿಕೊಂಡಿದೆ. ಯಾವುದೇ ಅಭಿವೃದ್ದಿ ಕಾರ್ಯ ಕೈಗೊಳ್ಳುವಾಗಲೂ ಅದಕ್ಕೆ ಅಡ್ಡಿಪಡಿಸಲು ಒಂದಷ್ಟು ಜನರಿರುತ್ತಾರೆ ಎಂದು ಅವರು ಕಿಡಿಕಾರಿದರು.