ಮುಂಬೈ, ಸೆ 16 (DaijiworldNews/DB): ಶಿವಸೇನೆಯ 12 ಮಂದಿ ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಶುಕ್ರವಾರ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಮಾಜಿ ಸಿಎಂ ಉದ್ದವ್ ಠಾಕ್ರೆ ಬಣಕ್ಕೆ ಮತ್ತೊಂದು ಹಿನ್ನೆಡೆ ಎದುರಾದಂತಾಗಿದೆ.
ಕರ್ನಾಟಕದ ಕುಮಾರ್ ಎಸ್. ಹಕಾರಿ, ದೆಹಲಿ ಶಿವಸೇನೆ ರಾಜ್ಯಾಧ್ಯಕ್ಷ ಸಂದೀಪ್ ಚೌಧರಿ, ಮಣಿಪುರ ರಾಜ್ಯಾಧ್ಯಕ್ಷ ಥೋಂಬಿ ಸಿಂಗ್, ಮಧ್ಯಪ್ರದೇಶದ ರಾಜ್ಯಾಧ್ಯಕ್ಷ ಥಾಡೇಶ್ವರ್ ಮಹಾವರ್ ಸೇರಿದಂತೆ ವಿವಿಧ ರಾಜ್ಯ ಘಟಕಾಧ್ಯಕ್ಷರು ಇಂದು ಶಿಂಧೆ ಬಣ ಸೇರ್ಪಡೆಯಾದರು. ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರು ಸೇರ್ಪಡೆಯಾಗುವ ಮೂಲಕ ಪಕ್ಷಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಸಂಘಟಿತ ಪ್ರಯತ್ನದೊಂದಿಗೆ ಪಕ್ಷ ಬಲವರ್ಧನೆ ಮಾಡಲಾಗುವುದು ಎಂದು ಏಕನಾಥ ಶಿಂಧೆ ಈ ವೇಳೆ ತಿಳಿಸಿದರು.
ರಾಜ್ಯ ಘಟಕಗಳ ಅಧ್ಯಕ್ಷರು ಶಿಂಧೆ ಬಣ ಸೇರ್ಪಡೆಯಾಗುವುದರ ಮೂಲಕ ಉದ್ದವ್ ಠಾಕ್ರೆ ಬಣಕ್ಕೆ ಆಘಾತ ಉಂಟಾಗಿದೆ ಎನ್ನಲಾಗಿದೆ.