ನವದೆಹಲಿ, ಸೆ 13 (DaijiworldNews/DB): ಗುಜರಾತ್ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಮ್ ಆದ್ಮಿ ಪಕ್ಷವು ಪಂಜಾಬ್ ಸರ್ಕಾರದ ಹಣವನ್ನು ವ್ಯಯಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಜಯ್ ಕುಮಾರ್, ಎಎಪಿ ಎಂಬುದು ಅರವಿಂದ ಅಡ್ವರ್ಟೈಸ್ಮೆಂಟ್ ಪಾರ್ಟಿ, ಅರವಿಂದ ಆಯಕ್ಟರ್ಸ್ ಪಾರ್ಟಿ, ಅರವಿಂದ್ ಐಶ್ ಪಾರ್ಟಿ ಎಂಬಂತಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಪಂಜಾಬ್ ಸರ್ಕಾರದ ದುಡ್ಡನ್ನು ಆ ಪಕ್ಷ ವ್ಯಯ ಮಾಡುತ್ತಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರಿಗೆ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ. ಆದರೆ ಗುಜರಾತ್ನಲ್ಲಿ ಜಾಹೀರಾತು ನೀಡಲು ದುಡ್ಡಿದೆ ಎಂದು ಟೀಕಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಣ ವ್ಯಯ ಮಾಡುತ್ತಿರುವ ಪಂಜಾಬ್ ಸರ್ಕಾರ 36 ಕೋಟಿ ರೂ.ಗಳನ್ನು ಎರಡೇ ತಿಂಗಳಿನಲ್ಲಿ ಜಾಹೀರಾತಿಗಾಗಿ ವ್ಯಯ ಮಾಡಿದೆ ಎಂದವರು ಆಪಾದಿಸಿದ್ದಾರೆ.
2015ರಲ್ಲಿ ದೆಹಲಿಯಲ್ಲಿ ಮಾಧ್ಯಮಗಳ ಜಾಹೀರಾತಿಗಾಗಿ 81 ಕೋಟಿ ರೂ.ಗಳನ್ನು ಆ ಪಕ್ಷ ವ್ಯಯಿಸಿದೆ. 2017-18ರಲ್ಲಿ 117 ಕೋಟಿ ರೂ., 2019ರಲ್ಲಿ 200 ಕೋಟಿ ರೂ., 2021-22ರಲ್ಲಿ 490 ಕೋಟಿ ರೂ.ಗಳನ್ನು ಕೇವಲ ಜಾಹಿರಾತು ಉದ್ದೇಶದಿಂದ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿವೇತನ ಕುರಿತಾದ ಜಾಹೀರಾತಿಗೆ 19 ಕೋಟಿ ರೂ. ಖರ್ಚು ಮಾಡಿರುವ ದೆಹಲಿ ಸರ್ಕಾರ ವಿದ್ಯಾರ್ಥಿವೇತನ ನೀಡಿದ್ದು ಕೇವಲ ಇಬ್ಬರು ವಿದ್ಯಾರ್ಥಿಗಳಿಗೆ. ಅವರ ಯೋಜನೆ ಯಶಸ್ವಿಯಾದಲ್ಲಿ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಯಾಕೆ ಸೇರ್ಪಡೆಗೊಳ್ಳುತ್ತಾರೆ? ಎಂದು ಪ್ರಶ್ನಿಸಿದರು.