ನವದೆಹಲಿ, ಸೆ 13 (DaijiworldNews/MS): 2015 ರಲ್ಲಿ ಉತ್ತರ ದೆಹಲಿಯ ಬುರಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಗುಂಪಿನ ಭಾಗವಾಗಿದ್ದ ಎಎಪಿ ಶಾಸಕರಾದ ಅಖಿಲೇಶ್ ಪತಿ ತ್ರಿಪಾಠಿ ಮತ್ತು ಸಂಜೀವ್ ಝಾ ಅವರನ್ನು ದೆಹಲಿ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ವೈಭವ್ ಮೆಹ್ತಾ ಅವರು ಪೊಲೀಸ್ ಠಾಣೆಯಲ್ಲಿ ಗಲಭೆ ಮತ್ತು ಪೊಲೀಸ್ ಸಿಬ್ಬಂದಿಗೆ ನೋವುಂಟು ಮಾಡಿದ ಪ್ರಕರಣದಲ್ಲಿ ಇತರ 15 ಮಂದಿಯನ್ನು ದೋಷಿಗಳೆಂದು ಘೋಷಿಸಿದ್ದಾರೆ.
ಶಾಸಕರನ್ನು ಹೊರತುಪಡಿಸಿ ಬಲರಾಂ ಝಾ, ಶ್ಯಾಮ್ ಗೋಪಾಲ್ ಗುಪ್ತಾ, ಕಿಶೋರ್ ಕುಮಾರ್, ಲಲಿತ್ ಮಿಶ್ರಾ, ಜಗದೀಶ್ ಚಂದ್ರ ಜೋಶಿ, ನರೇಂದ್ರ ಸಿಂಗ್ ರಾವ್, ನೀರಜ್ ಪಾಠಕ್, ರಾಜು ಮಲಿಕ್, ಅಶೋಕ್ ಕುಮಾರ್, ರವಿ ಪ್ರಕಾಶ್ ಝಾ, ಇಸ್ಮಾಯಿಲ್ ಇಸ್ಲಾಂ, ಮನೋಜ್ ಕುಮಾರ್, ವಿಜಯ್ ಪ್ರತಾಪ್ ಸಿಂಗ್, ಹೀರಾ ದೇವಿ ಮತ್ತು ಯಶ್ವಂತ್ ಇತರ ದೋಷಿಗಳಾಗಿದ್ದಾರೆ.
ಸೆಪ್ಟೆಂಬರ್ 21 ರಂದು ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದು , ತಪ್ಪಿತಸ್ಥರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇಬ್ಬರೂ ಶಾಸಕರು ಕಾನೂನುಬಾಹಿರ ಸಭೆಯ ಭಾಗವಾಗಿದ್ದಾರೆ, ಇದು ಪೊಲೀಸ್ ಅಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ಮಾಡದಂತೆ ಅಡ್ಡಿಪಡಿಸಿದೆ ಎಂದು ಪ್ರಕರಣದಲ್ಲಿ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
2015ರ ಫೆಬ್ರುವರಿ 20ರಂದು ರಾತ್ರಿ ಗಲಭೆ ನಡೆದಿತ್ತು. ಠಾಣೆಯಲ್ಲಿ ಬಂಧಿಸಲಾಗಿದ್ದ ಇಬ್ಬರನ್ನು ತಮ್ಮ ವಶಕ್ಕೆ ನೀಡುವಂತೆ ದುಷ್ಕರ್ಮಿಗಳ ಗುಂಪು ಒತ್ತಾಯಿಸಿತ್ತು. ಅವರನ್ನು ಸಮಾಧಾನ ಪಡಿಸಲು ಪೊಲೀಸರು ಪ್ರಯತ್ನಿಸಿದ್ದರು. ಆದರೆ, ಶಾಸಕರು ಗಲಭೆಗೆ ಪ್ರಚೋದನೆ ನೀಡಿದ್ದರು. ಈ ವೇಳೆ ಗುಂಪಿನಲ್ಲಿದ್ದವರು ಕಲ್ಲು ತೂರಾಟ ನಡೆಸಿ, ಪೊಲೀಸರ ಮೇಲೂ ಹಲ್ಲೆ ನಡೆಸಿದ್ದರು