ಬೆಂಗಳೂರು, ಸೆ 10 (DaijiworldNews/DB): ಕೋಮುವಾದ, ಭ್ರಷ್ಟಾಚಾರ, ಬೆಲೆ ಏರಿಕೆಯೊಂದಿಗೆ ಅಧಿಕಾರ ನಡೆಸಿರುವುದೇ ಬಿಜೆಪಿ ಸಾಧನೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ನುಡಿದಂತೆ ನಡೆದಿತ್ತು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೇಳಿದ್ದಾರೆ.
ಭಾರತ ಜೋಡೋ ಯಾತ್ರೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಪ್ರತಿಯೊಬ್ಬ ಯುವಕರು ಶ್ರಮಿಸಬೇಕು ಎಂದರು.
ಯುವಕರ ಧ್ವನಿಯಾಗಬೇಕೆಂಬ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಕಾರ್ಯಕ್ರಮ ರೂಪಿಸಲು ನಿರ್ದೇಶನ ನೀಡಿದ್ದರು. ಕಾರ್ಯಕ್ರಮದ ಮೂಲಕ ಯುವಕರ ಕಷ್ಟಕ್ಕೆ ಸ್ಪಂದಿಸುವುದು ಉದ್ದೇಶ ಎಂದು ತಿಳಿಸಿದ ಅವರು, ಯುವ ದೃಷ್ಟಿ, ಉದ್ಯೋಗ ಸೃಷ್ಟಿ ಎಂಬೆರಡು ಕಾರ್ಯಕ್ರಮ ಆಯೋಜಿಸಿದ್ದೇವೆ. ಯುವ ಉದ್ಯೋಗ ಸೃಷ್ಟಿ ಆಪ್ ಮೂಲಕ 41 ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಣಿ ಮಾಡಿದ್ದಾರೆ. ವೆಬ್ಸೈಟ್ ಮೂಲಕ ರಾಜ್ಯದ ಎಲ್ಲಾ ಯುವಕರು ಇದರಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.
ಭಾರತವನ್ನು ಒಗ್ಗೂಡಿಸುವ ಸಲುವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಮ್ಮ ನಾಯಕ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇದೇ ಸೆಪ್ಟಂಬರ್ 30ರಂದು ಯಾತ್ರೆ ಪ್ರಾರಂಭವಾಗಲಿದೆ. 21 ದಿನ ನಡೆಯುವ ಯಾತ್ರೆಯಲ್ಲಿ ಎರಡು ದಿನ ನಿರುದ್ಯೋಗಿ ಯುವಕರೊಂದಿಗೆ ಸ್ವತಃ ರಾಹುಲ್ ಗಾಂಧಿಯವರೇ ಸಂವಾದಿಸಲಿದ್ದಾರೆ. ಅವರ ಸಂಕಷ್ಟಕ್ಕೆ ಧ್ವನಿಯಾಗುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.