ನವದೆಹಲಿ, ಸೆ 10 (DaijiworldNews/DB): ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಸಂಬಂಧಿ ನಡೆಯುವ ಚುನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಪಕ್ಷದ ಐವರು ಸಂಸದರು ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದಿದ್ದಾರೆ.
ಸಂಸದರಾದ ಶಶಿ ತರೂರ್, ಮನೀಷ್ ತಿವಾರಿ, ಕಾರ್ತಿ ಚಿದಂಬರಂ, ಪ್ರದ್ಯೂತ್ ಬೋರ್ದೊಲೊಯಿ ಹಾಗೂ ಅಬ್ದುಲ್ ಖಾಲಿಕ್ ಪತ್ರ ಬರೆದಿದ್ದಾರೆ. ಮತದಾರರ ಪಟ್ಟಿ ರೂಪಿಸುವ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳ ವಿವರವನ್ನು ಮತದಾರರು ಮತ್ತು ಸಂಭಾವ್ಯ ಅಭ್ಯರ್ಥಿಗಳಿಗೆ ನೀಡಬೇಕು. ಅಭ್ಯರ್ಥಿಗಳ ನಾಮ ನಿರ್ದೇಶನಕ್ಕಾಗಿ ಹಾಗೂ ಮತ ಚಲಾಯಿಸಲು ಅರ್ಹರು ಯಾರೆಂಬುದನ್ನು ಪರಿಶೀಲಿಸಲು ಇದು ಅಗತ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸೆಪ್ಟೆಂಬರ್ 6ರಂದು ಈ ಪತ್ರವನ್ನು ಮಧುಸೂದನ್ ಮಿಸ್ತ್ರಿ ಅವರಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.
28 ಪ್ರದೇಶ ಕಾಂಗ್ರೆಸ್ ಸಮಿತಿಗಳು ಅಸ್ತಿತ್ವದಲ್ಲಿರುವುದರಿಂದ ಈ ಎಲ್ಲಾ ಕಡೆಗಳಿಗೂ ಮತದಾರರು ಮತ್ತು ಅಭ್ಯರ್ಥಿಗಳು ಮತದಾರರ ಪಟ್ಟಿ ಪರಿಶೀಲನೆಗೆ ತೆರಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪಕ್ಷದಿಂದಲೇ ಎಲ್ಲರಿಗೂ ಆ ಪಟ್ಟಿ ಲಭಿಸುವಂತೆ ವ್ಯವಸ್ಥೆ ಮಾಡಬೇಕು ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.
ಮತದಾರರ ಪಟ್ಟಿ ಬಿಡುಗಡೆ ಮಾಡಬೇಕೆಂಬ ನಮ್ಮ ಬೇಡಿಕೆ ಮಾಡಬೇಕೆಂಬ ನಮ್ಮ ಬೇಡಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆಂತರಿಕ ದಾಖಲೆಗಳನ್ನು ಬಹಿರಂಗಗೊಳಿಸುವುದರಿಂದ ಅದು ದುರುಪಯೋಗವಾಗುವುದೇ ಹೆಚ್ಚು ಎಂಬುದು ನಮಗೆ ಗೊತ್ತಿದೆ. ಆಂತರಿಕ ದಾಖಲೆ ಬಿಡುಗಡೆಗೆ ನಾವು ಒತ್ತಡ ಹೇರಿಲ್ಲ ಎಂದು ಇದೇ ವೇಳೆ ಐವರು ಸಂಸದರು ತಮ್ಮ ವಿರುದ್ದ ಬಂದಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಚುನಾವಣೆ ನಡೆಯಲಿದ್ದು, ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದೆ.