ಚಿತ್ರದುರ್ಗ, ಸೆ 02 (DaijiworldNews/MS): ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬಂಧಿತರಾಗಿ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.
ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಹೆಚ್ಚಿನ ತಪಾಸಣೆಗಾಗಿ ತೀವ್ರನಿಗಾ ಘಟಕಕ್ಕೆ ಕರೆತಂದಿದ್ದಾರೆ. ಹೃದಯ ಪರೀಕ್ಷೆಯ ವರದಿ ಆಧರಿಸಿ ಚಿಕಿತ್ಸೆ ಬಗ್ಗೆ ವೈದ್ಯರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
ಜಿಲ್ಲಾ ಕಾರಾಗೃಹದಲ್ಲಿದ್ದ ಅವರಿಗೆ ಬೆಳಿಗ್ಗೆ ೯ ರ ಸುಮಾರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದೆ. ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಬೆಳಿಗ್ಗೆ 9.30 ಕರೆತಂದು ಹೊರರೋಗಿ ಚಿಕಿತ್ಸಾ ಘಟಕದಲ್ಲಿ ತಪಾಸಣೆ ನಡೆಸಲಾಯಿತು. ವೈದ್ಯಾಧಿಕಾರಿ ಶಿವಕುಮಾರ, ವೈದ್ಯೆ ಲೀಲಾ ರಾಘವನ್ ಅವರ ಸಲಹೆ ಮೇರೆಗೆ ಸೀಟಿ ಸ್ಕ್ಯಾನ್, ಆಲ್ಟ್ರಾಸೌಂಡ್, ರಕ್ತ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳನ್ನು ನಡೆಸಲಾಗಿದೆ.
ಈ ಸಂದರ್ಭ ಹೃದಯ ಸಂಬಂಧಿ ಸಮಸ್ಯೆ ಪತ್ತೆಯಾಗಿದ್ದರಿಂದ ತಜ್ಞ ವೈದ್ಯರ ಸಲಹೆ ಪಡೆಯಲಾಗುತ್ತಿದ್ದು, ಚಿಕಿತ್ಸೆಗೆ ದಾವಣಗೆರೆಯಿಂದ ವೈದ್ಯರನ್ನು ಕರೆಸಲಾಗುತ್ತಿದೆ ಎಂಬ ವರದಿಯಾಗಿದೆ