ನವದೆಹಲಿ, ಸೆ 01 (DaijiworldNews/DB): ದಾವೂದ್ ಇಬ್ರಾಹಿಂ ಕುರಿತು ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಘೋಷಿಸಿದೆ.
1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿಯಾಗಿರುವ ದಾವೂದ್ ಸದ್ಯ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆಗಾಗಿ ಎನ್ಐಎ ಪ್ರಯತ್ನಿಸುತ್ತಲೇ ಇದೆ. ಇದೀಗ ಆತನ ಕುರಿತು ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಬಹುಮಾನವನ್ನು ಎನ್ಐಎ ಘೋಷಿಸಿದೆ.
ಇದೇ ವೇಳೆ ತನಿಖಾ ಸಂಸ್ಥೆಯು ದಾವೂದ್ ಇಬ್ರಾಹಿಂನ ಆಪ್ತ ಶಕೀಲ್ ಶೇಖ್ ಕುರಿತು ಮಾಹಿತಿ ನೀಡಿದವರಿಗೆ 20 ಲಕ್ಷ ರೂ., ಸಹಚರರಾದ ಹಾನಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್, ಜಾವೇದ್ ಪಟೇಲ್, ಜಾವೇದ್ ಚಿಕ್ನಾ, ಇಬ್ರಾಹಿಮ್ ಮುಸ್ತಾಕ್, ಅಬ್ದುಲ್ ರಜಾಕ್ ಮೆಮೊನ್ ಅಲಿಯಾಸ್ ಟೈಗರ್ ಮೆಮೊನ್ ಕುರಿತಾದ ಮಾಹಿತಿ ನೀಡಿದವರಿಗೆ 15 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದೆ. 1993 ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿ ಈ ಎಲ್ಲಾ ಆರೋಪಿಗಳು ಬೇಕಾಗಿದ್ದು, ಬಂಧನಕ್ಕಾಗಿ ಎನ್ಐಎ ಎಲ್ಲಾ ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದೆ ಎಂದು ತಿಳಿದು ಬಂದಿದೆ.