ತಿರುವನಂತಪುರ, ಆ 31 (DaijiworldNews/DB): ಸಂಸದ ಶಶಿ ತರೂರು ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದಾರೆ ಎಂದು ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಸುಧಾಕರನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ಪ್ರಜಾಪ್ರಭುತ್ವದ ಪಕ್ಷ. ಉನ್ನತ ಹುದ್ದೆಗಳಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಶಶಿ ತರೂರ್ ಸ್ಪರ್ಧಿಸಿದರೆ ಯಾವುದೇ ಅಪಸ್ವರದ ಅಗತ್ಯ ಇಲ್ಲ. ಅಲ್ಲದೆ ಶಶಿ ತರೂರು ಸ್ಪರ್ಧಿಸಿದರೂ ಯಾವುದೇ ಅಚ್ಚರಿ ಪಡುವ ಅವಶ್ಯಕತೆ ಇಲ್ಲ ಎಂದರು.
ನಾನು ಸ್ಪರ್ಧಿಸಲು ಬಯಸಿದರೆ ನಂಗೂ ಅವಕಾಶವಿದೆ. ಯಾರೇ ಸ್ಪರ್ಧಿಸಲು ಮುಂದೆ ಬಂದರೂ ಪಕ್ಷ ಅವರನ್ನು ಸ್ವಾಗತಿಸುತ್ತದೆ. ಯಾರಿಗೆ ಹೆಚ್ಚು ಮತ ಸಿಗುತ್ತದೆಯೋ ಅವರು ಗೆಲುವು ಸಾಧಿಸಿ ಅಧ್ಯಕ್ಷ ಹುದ್ದೆಗೇರುತ್ತಾರೆ ಎಂದವರು ತಿಳಿಸಿದರು.
ಪಕ್ಷದಲ್ಲಿ ಚುನಾವಣೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎನ್ನುವ ಮೂಲಕ ಶಶಿ ತರೂರ್ ಅವರು ಸ್ಪರ್ಧಿಸುವ ಬಯಕೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದರು. ಅಲ್ಲದೆ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದರೊಂದಿಗೆ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಗೂ ಚುನಾವಣೆ ನಡೆಯಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು.