ನವದೆಹಲಿ, ಆ 30 (DaijiworldNews/DB): ಜಾರ್ಖಂಡ್ನಲ್ಲಿ ಬಾಲಕಿಗೆ ಬೆಂಕಿ ಹಚ್ಚಿ ಕೊಂದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಾಲಕಿ ಮೇಲೆ ನಡೆದ ಕ್ರೌರ್ಯವು ಪ್ರತಿ ಭಾರತೀಯನನ್ನೂ ತಲೆ ತಗ್ಗಿಸುವಂತ ಕೃತ್ಯವಾಗಿದೆ. ಬಾಲಕಿ ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಬೇಕು. ಕ್ರೂರ ಕೃತ್ಯ ಎಸಗಿದಾತನಿಗೆ ಕಠಿಣ ಶಿಕ್ಷೆ ವಿಧಿಸಿದಲ್ಲಿ ಮಾತ್ರ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯ ಎಂದಿದ್ದಾರೆ.
ದೇಶದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಾಣವಾಗಬೇಕಾದ ಅಗತ್ಯತೆ ತುಂಬಾ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಆದ್ಯ ಗಮನ ಹರಿಸಬೇಕು ಎಂದವರು ಇದೇ ವೇಳೆ ಆಗ್ರಹಿಸಿದ್ದಾರೆ.
ಪೊಲೀಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಂಕಿತಾ ಸಿಂಗ್ ಎಂಬಾಕೆಯನ್ನು ಶಾರುಖ್ ಎಂಬಾತ ಸ್ನೇಹಕ್ಕೆ ಒತ್ತಾಯಿಸಿ ಆಕೆ ಒಪ್ಪದಿದ್ದಾಗ ಕೊಲೆ ಬೆದರಿಕೆ ಒಡ್ಡಿದ್ದಲ್ಲದೆ, ಆಕೆ ಮಲಗಿದ್ದಾಗ ಕಿಟಕಿ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿದ್ದ. ಆಗಸ್ಟ್ 23 ರಂದು ಘಟನೆ ನಡೆದಿತ್ತು. ಗಂಭೀರ ಸುಟ್ಟ ಗಾಯಗಳೊಂದಿಗೆ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಸಾವು-ಬದುಕಿನ ನಡುವೆ ಹೋರಾಡಿದ್ದ ಆಕೆ ಆಗಸ್ಟ್ 28ರಂದು ಸಾವನ್ನಪ್ಪಿದ್ದಳು.