ತುಮಕೂರು, ಆ 30 (DaijiworldNews/MS): ಚಿಕ್ಕನಾಯಕನಹಳ್ಳಿ ತಾಲೂಕಿನ ಅಂಗನವಾಡಿಯೊಂದರಲ್ಲಿ , ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಾನೆ ಎಂದು ಮೂರು ವರ್ಷದ ಬಾಲಕನನ್ನು ಗದರಿಸಲೆಂದು ಅಂಗನವಾಡಿ ಕೇಂದ್ರದ ಶಿಕ್ಷಕಿ ಮತ್ತು ಸಹಾಯಕಿ ಸೇರಿ ಬಾಲಕನ ಗುಪ್ತಾಂಗಕ್ಕೆ ಬೆಂಕಿಕಡ್ಡಿಯಿಂದ ಗೀರಿ ಸುಟ್ಟಿರುವ ಪ್ರಕರಣ ನಡೆದಿದೆ.
ಅಂಗನವಾಡಿಯಲ್ಲಿ ಪದೇ ಪದೇ ಮೂತ್ರ ಮತ್ತು ಶೌಚವನ್ನು ಮಾಡುತ್ತಿದ್ದ ಮೂರು ವರ್ಷದ ಬಾಲಕನನ್ನು ಬೆದರಿಸಲು, ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಬೆಂಕಿಕಡ್ಡಿ ಗೀರಿದ್ದು, ಚಡ್ಡಿ ಹಾಕದೇ ಕುಳಿತುಕೊಂಡಿದ್ದ ಬಾಲಕನ ಗುಪ್ತಾಂಗಕ್ಕೆ ತಗುಲಿ ಗಾಯವಾಗಳಾಗಿವೆ.
ಮನೆಗೆ ಹೋದಾಗ ಸುಟ್ಟ ಗಾಯ ಗಮನಿಸಿದ ಅಜ್ಜಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ. ಈ ಘಟನೆ ತಿಳಿದು ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಮಕ್ಕಳು, ಶಿಕ್ಷಕಿ, ಸಹಾಯಕಿ ಮತ್ತು ಬಾಲಕನ ಪೋಷಕರ ಹೇಳಿಕೆ ಪಡೆದಿದ್ದಾರೆ. ಕೇಂದ್ರದ ಶಿಕ್ಷಕಿ ಹಾಗೂ ಸಹಾಯಕಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲ್ಲೂಕು ಅಧಿಕಾರಿ ನೋಟಿಸ್ ನೀಡಿ ತಪ್ಪೊಪ್ಪಿಗೆ ಪತ್ರ ಪಡೆದಿದ್ದಾರೆ.