ಕಲಬುರ್ಗಿ, ಆ 27 (DaijiworldNews/MS): ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಮಹಿಳಾ ಕೋಟಾದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದ ರಚನಾ ಹನುಮಂತ (25) ಎಂಬ ಅಭ್ಯರ್ಥಿಯನ್ನು ಶನಿವಾರ ಬಂಧಿಸಲಾಗಿದೆ.
ಅಕ್ರಮವಾಗಿ ಒಎಂಆರ್ ಉತ್ತರ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಿಸಿದ ಆರೋಪ ರಚನಾ ಮೇಲಿದೆ. ವಿಶೇಷವೆನಂದರೆ ಪಿಎಸ್ಐ ಪರೀಕ್ಷಾ ಅಕ್ರಮ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ಆದರೆ ಒಂದೊಂದೆ ಹಗರಣ ಹೊರಬಂದಾಗಿನಿಂದ ರಚನಾ ನಾಪತ್ತೆಯಾಗಿದ್ದು ಇದೀಗ ಮಹಾರಾಷ್ಟ್ರ-ಕರ್ನಾಟಕ ಗಡಿ ಹಿರೋಳ್ಳಿ ಚೆಕ್ಪೋಸ್ಟ್ ಬಳಿ ಜಾಲ ಬೀಸಿ ರಚನಾಳನ್ನು ಬಂಧಿಸಲಾಗಿದೆ.
ರಚನಾ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಮೂಲದವಳಾಗಿದ್ದು, ಕಳೆದ ಒಂದೂವರೆ ತಿಂಗಳಿಂದ ಕಲಬುರಗಿ ಸಿಐಡಿ ಅಧಿಕಾರಿಗಳು ಬಂಧನಕ್ಕೆ ಬಲೆಬೀಸಿದ್ದಾರೆ.
ಸಿಐಡಿ ತಂಡ ರಚನಾಳನ್ನು ಬಂಧಿಸಿ ಕಲಬುರ್ಗಿ ಕರೆ ತಂದಿದ್ದು, ಶನಿವಾರ ಕಲಬುರಗಿ 5 ನೇ JMFC ಕೋರ್ಟ್ ನ್ಯಾಯಾಧೀಶರ ಮುಂದೆ ರಚನಾಳನ್ನು ಹಾಜರುಪಡಿಸಲಾಗಿದೆ.