ಬೆಂಗಳೂರು, ಅ 26(DaijiworldNews/MS): ಶಿಕ್ಷಣ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಲಂಚವಿಲ್ಲದೆ ಯಾವುದೇ ಕೆಲಸಗಳು ಆಗುವುದಿಲ್ಲ ಎಂಬ ಪರಿಸ್ಥಿತಿಯಿದೆ. ಹೀಗಾಗಿ ತಕ್ಷಣ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನು ವಜಾ ಮಾಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘ (ರುಪ್ಸಾ)ದ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರನ್ನ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಮೂರನೇ ಬಾರಿ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇವೆ. ವಜಾಗೊಳಿಸದಿದ್ದರೇ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಶೋಕಿ ಮಾಡೋರನ್ನ ಶಿಕ್ಷಣ ಸಚಿವರನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ
ಆರ್ ಆರ್ ನೀಡಲು ಕೂಡಾ ಲಂಚ ಪಡೆಯಲಾಗುತ್ತಿದೆ. 10 ವರ್ಷಗಳಿಗೊಮ್ಮೆ ಮಾನ್ಯತೆ ನವೀಕರಣ ಹೊಂದಿರಬೇಕೆಂದು ಹೈಕೋರ್ಟ್ ಹೇಳಿದೆ ಆದರೆ 2 ವರ್ಷಕ್ಕೊಮ್ಮೆ ಲಂಚ ಪಡೆಯುತ್ತಿರುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಇಲಾಖೆಯ ಬಹುತೇಕ ಕೆಲಸಗಳಿಗೆ ಆನ್ ಲೈನ್ ವ್ಯವಸ್ಥೆ ಇಲ್ಲ. ಆನ್ ಲೈನ್ ವ್ಯವಸ್ಥೆ ಇಲ್ಲದ್ದಕ್ಕೆ ಅಧಿಕಾರಿಗಳೆಲ್ಲಾರೂ ಲಂಚಬಾಕರಾಗಿದ್ದಾರೆ ಎಂದು ಆರೋಪಿಸಿದ್ದಾರೆ