ಹೊಸದಿಲ್ಲಿ, ಆ 25 (DaijiworldNews/DB): ತಮ್ಮ ಹೇಳಿಕೆಯನ್ನು ತಿರುಚಿ ದುರುದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.
ಸಮಾರಂಭವೊಂದರಲ್ಲಿ ಮಾಡಿದ ಭಾಷಣದ ಆಯ್ದ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ದುರುದ್ದೇಶಪೂರಿತವಾಗಿ ಹೇಳಿಕೆ ತಿರುಚುವ ಪ್ರಯತ್ನ ನಡೆಯುತ್ತಿದೆ. ಆ ಮೂಲಕ ನನ್ನ ರಾಜಕೀಯ ವ್ಯಕ್ತಿತ್ವವನ್ನು ಹಾಳುಗೆಡಹುವ ಪ್ರಯತ್ನ ಆಗುತ್ತಿದೆ. ಆದರೆ ಇಂತಹವುಗಳಿಂದ ನಾನು ವಿಚಲಿತನಾಗುವುದಿಲ್ಲ. ಕಿಡಿಗೇಡಿಗಳು ಇಂತಹವುಗಳನ್ನು ಮುಂದುವರಿಸಿದರೆ ಕಾನೂನು ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಟ್ವೀಟ್ ಮಾಡಿ ಅವರು ಎಚ್ಚರಿಸಿದ್ದಾರೆ.
ಕೆಲವು ಪ್ರಮುಖ ವಾಹಿನಿಗಳು, ಮಾಧ್ಯಮಗಳು, ಕೆಲ ವ್ಯಕ್ತಿಗಳು ಇಂತಹ ಕೃತ್ಯದಲ್ಲಿ ಭಾಗಿಯಾಗಿ ದುರುದ್ದೇಶಪೂರಿತವಾಗಿ ನನ್ನ ವಿರುದ್ದ ಅಭಿಯಾನ ನಡೆಸುತ್ತಿದ್ದಾರೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡುತ್ತಾ ನಾನು ಕೆಲಸ ಮಾಡುತ್ತೇನೆ, ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ. ಸಾಧ್ಯವಿದ್ದರೆ ನನ್ನ ಜೊತೆ ನಿಲ್ಲಬಹುದು, ಇಲ್ಲವಾದರೆ ಅಗತ್ಯವಿಲ್ಲ ಎಂದಿದ್ದರು. ಇದಕ್ಕೂ ಮೊದಲು ಗಡ್ಕರಿ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ ಎಂದು ಪ್ರಮುಖ ದೈನಿಕವೊಂದೂ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು.