ಬೆಂಗಳೂರು, ಅ 25 (DaijiworldNews/MS): " ಕಮಿಷನ್ಗೂ ಪ್ರಮೋಷನ್ ಕೊಟ್ಟ ದೇಶದ ಏಕೈಕ ಸರ್ಕಾರವೆಂದರೇ ಅದು ಬಿ.ಎಸ್ ಬೊಮ್ಮಾಯಿ ಸರ್ಕಾರದ್ದು" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ವ್ಯಂಗ್ಯವಾಡಿದ್ದಾರೆ .
40% ಕಮಿಷನ್ ಆರೋಪ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ದಿನೇಶ್ ಗುಂಡುರಾವ್ , " ಮೊದಲು 40% ಕಮಿಷನ್ ಇದ್ದದ್ದು ಈಗ 50% ಪರ್ಸೆಂಟ್ ಕಮಿಷನ್ ಆಗಿದೆ. ಕಮಿಷನ್ಗೂ ಪ್ರಮೋಷನ್ ಕೊಟ್ಟ ದೇಶದ ಏಕೈಕ ಸರ್ಕಾರ ಬೊಮ್ಮಾಯಿಯವರದ್ದು. ಇತ್ತೀಚೆಗೆ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಕಮಿಷನ್ ಪರ್ಸಂಟೇಜ್ ಜಾಸ್ತಿಯಾದಂತಿದೆ. ಬೊಮ್ಮಾಯಿಯವರೆ, ದೆಹಲಿಗೆ ಕಪ್ಪ ಕಾಣಿಕೆ ಸಲ್ಲಿಸಲು ಈ ಕಮಿಷನ್ ರೇಟ್ ಜಾಸ್ತಿಯಾಯಿತೆ ಎಂದು ಪ್ರಶ್ನಿಸಿದ್ದಾರೆ.
ಬಿಎಸ್ ಬೊಮ್ಮಯಿಯವರೇ, ಮುಂದಿನ ತಿಂಗಳು ಪ್ರಧಾನಿ ಮೋದಿ ಮಂಗಳೂರಿಗೆ ಬರುತ್ತಿದ್ದಾರೆ.ಪ್ರತಿ ಸಲ ಅವರ ಬುರುಡೆ ಭಾಷಣ ಕೇಳಿ ಕೇಳಿ ಸಾಕಾಗಿದೆ.ಈ ಬಾರಿಯಾದರೂ 40% ಕಮಿಷನ್ 50% ಏರಿಕೆಯಾಗಿದ್ದು ಯಾಕೆ? ಅದು ಯಾರ ಉದ್ಧಾರಕ್ಕೆ? ಕಮಿಷನ್ ದಂಧೆಯಲ್ಲಿ ಬಿಜೆಪಿ ನಾಯಕರಿಗೆ ಸಂದಾಯವಾಗುತ್ತಿರುವ ಪಾಲಿನ ಬಗ್ಗೆ ಮೋದಿಯವರಿಂದ ಭಾಷಣ ಮಾಡಿಸಲು ಸಾಧ್ಯವೇ ಎಂದು ಕೇಳಿದ್ದಾರೆ.
ಈ ಸರ್ಕಾರದ ಭ್ರಷ್ಟಾಚಾರದ ಕರ್ಮಕಾಂಡದ ಬಗ್ಗೆ ಮೊನ್ನೆಯಷ್ಟೇ ಹೈಕೋರ್ಟ್ ಚಾಟಿ ಬೀಸಿದೆ. ಇಷ್ಟದಾರೂ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ.ಈ ಸರ್ಕಾರದ ನಡೆ ನೋಡಿದರೆ ಆಲಿಬಾಬ ಮತ್ತು 40 ಕಳ್ಳರ ಕಥೆ ನೆನಪಾಗುತ್ತದೆ. ಕಳ್ಳರು ಜನರಿಂದ ದೋಚಿದರೆ, ಆಲಿಬಾಬ ಕಳ್ಳರಿಂದ ದೋಚಿದಂತಾಗಿದೆ.ಆದರೆ ಆ ಆಲಿಬಾಬ ಯಾರು ಎಂದು ಮೋದಿಯವರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ.