ವಾರಣಾಸಿ, ಆ 24 (DaijiworldNews/DB): ವಾರಣಾಸಿಯ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ದೇಗುಲ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಅಂತ್ಯಗೊಂಡಿದ್ದು, ಸೆಪ್ಟೆಂಬರ್ 12 ರಂದು ತೀರ್ಪು ಪ್ರಕಟಗೊಳ್ಳಲಿದೆ.
ವಿವಾದದ ವಿಚಾರಣೆಯು ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ನ್ಯಾಯಾಲಯವು ಬುಧವಾರ ತೀರ್ಪು ಕಾಯ್ದಿರಿಸಿತ್ತು. ಸೆಪ್ಟೆಂಬರ್ 12 ರಂದು ತೀರ್ಪು ಪ್ರಕಟಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿ ಜ್ಞಾನವ್ಯಾಪಿ ಮಸೀದಿಯಿದ್ದು, ಈ ಮಸೀದಿ ಹಿಂಭಾಗ ಇದ್ದ ಶೃಂಗಾರ್ ಗೌರಿ ದೇವಳವನ್ನು ಕೆಡವಿ ಮಸೀದಿ ಕಟ್ಟಲಾಗಿದೆ ಎಂದು ಹಿಂದೂ ಮುಖಂಡರುಗಳು ಹೇಳಿದ್ದರು. ಆದರೆ ಇಲ್ಲಿ ದೇವಳ ಇರಲಿಲ್ಲ ಎಂಬುದಾಗಿ ಮುಸ್ಲಿಂ ಮುಖಂಡರುಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಸೀದಿಯನ್ನು ಸಮೀಕ್ಷೆ ನಡೆಸಲಾಗಿದ್ದು, ಕೊಳದಲ್ಲಿ ಶಿವಲಿಂಗಾಕೃತಿ ಹಾಗೂ ಗೋಡೆಗಳಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಚಿಹ್ನೆಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿವಾದ ಮತ್ತಷ್ಟು ಹೆಚ್ಚಿತ್ತು. ಹೀಗಾಗಿ ವಿವಾದವು ಕೋರ್ಟ್ ಮೆಟ್ಟಿಲೇರಿತ್ತು.