ಮುಂಬೈ, ಅ 24 (DaijiworldNews/MS): ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆ-ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಕೆಣಕುವ ಉದ್ದೇಶದಿಂದ ಬುಧವಾರ ವಿಧಾನ ಭವನದ ಮೆಟ್ಟಿಲುಗಳ ಮುಂದೆ ಎನ್ಸಿಪಿ ಶಾಸಕರು ಕ್ಯಾರೆಟ್ ಹಿಡಿದುಕೊಂಡ ಪ್ರತಿಭಟಿಸಿದ್ದು ಇದು ಕೆಲಕಾಲ ಉದ್ವಿಗ್ನತೆಗೆ ಕಾರಣವಾಗಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುತ್ತಿರುವ ಶಿವಸೇನೆಯ ಶಾಸಕರು ಮತ್ತು ಕೆಲವು ವಿರೋಧ ಪಕ್ಷದ ಶಾಸಕರು ಬುಧವಾರ ಮುಂಬೈನ ವಿಧಾನ ಭವನದ ಮೆಟ್ಟಿಲುಗಳ ಮೇಲೆ ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಈ ವೇಳೆ ತಳ್ಳಾಟ ನೂಕಾಟವೂ ನಡೆಯಿತು.
ಆಡಳಿತಾರೂಢ ಶಿವಸೇನೆ-ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಕೆಣಕುವ ಉದ್ದೇಶದಿಂದ ಎನ್ಸಿಪಿ ಶಾಸಕರು ಕ್ಯಾರೆಟ್ ಹಿಡಿದುಕೊಂಡಿದ್ದರು. ಈ ವೇಳೆ
ಶಿಂಧೆ ಬಣದ ಶಾಸಕರು ಎನ್ಸಿಪಿ ಶಾಸಕರಿಂದ ಕ್ಯಾರೆಟ್ ಕಸಿದುಕೊಳ್ಳಲು ಪ್ರಯತ್ನಿಸಿದ್ದು, ಶಾಸಕಾಂಗ ಕಟ್ಟಡದ ಮೆಟ್ಟಿಲುಗಳ ಮೇಲೆ ಉದ್ವಿಗ್ನ ವಾತಾವರಣ ಮುಂದುವರಿಯುತ್ತಿದ್ದಂತೆಯೇ ಉಭಯ ಪಕ್ಷಗಳ ಕೆಲ ಶಾಸಕರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಮನಗೊಳಿಸಿದರು.
ಉಭಯ ಪಕ್ಷಗಳ ಸದಸ್ಯರು ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೆಲಕಾಲ ಸದನಕ್ಕೆ ತೆರಳಿ ದಿನದ ಕಲಾಪದಲ್ಲಿ ಪಾಲ್ಗೊಂಡರು.ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯವಾಗಲಿದೆ.
ಶಿಂಧೆ ಮತ್ತು ಇತರ 39 ಶಿವಸೇನೆ ಶಾಸಕರು ಈ ವರ್ಷದ ಜೂನ್ನಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು, ಇದು ಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡಿರುವ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನಕ್ಕೆ ಕಾರಣವಾಗಿತ್ತು.