ಬೆಂಗಳೂರು, ಆ 23 (DaijiworldNews/HR): ಎಚ್ಎಎಲ್ ಸಮೀಪದ ದೊಡ್ಡನೆಕ್ಕುಂದಿಯಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಗೃಹಿಣಿಯೊಬ್ಬರು ತನ್ನ ನಾಲ್ಕು ವರ್ಷದ ಮಗುವನ್ನು ನೀರಿನ ಟಬ್ನಲ್ಲಿ ಮುಳುಗಿಸಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮೃತ ಮಗುವನ್ನು ಸಂಯುಕ್ತಾ (4) ಎಂದು ಗುರುತಿಸಲಾಗಿದ್ದು, ಕೊಲೆಗೈದು ನೇಣು ಬಿಗಿದುಕೊಂಡಿದ್ದ ಗಾಯತ್ರಿ ದೇವಿ (23) ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಯುಕ್ತ ಜತೆ ದೊಡ್ಡನೆಕ್ಕುಂದಿಯ ಅಪಾರ್ಟ್ಮೆಂಟ್ನಲ್ಲಿ ತಮಿಳುನಾಡು ಮೂಲದ ನರೇಂದ್ರ ಹಾಗೂ ಗಾಯತ್ರಿ ದೇವಿ ದಂಪತಿ, ಮಗು ವಾಸವಾಗಿದ್ದು, ಕೆಲಸದ ನಿಮಿತ್ತ ಪತಿ ನರೇಂದ್ರ ಭಾನುವಾರ ತಮಿಳುನಾಡಿನಲ್ಲಿರುವ ತಮ್ಮ ಊರಿಗೆ ಹೋಗಿದ್ದರು. ಸೋಮವಾರ ಮುಂಜಾನೆ ಫ್ಲ್ಯಾಟ್ ಬಳಿ ಬಂದು ಬಾಗಿಲು ತಟ್ಟಿದರೂ ಸದ್ದಿಲ್ಲದ ಕಾರಣ ಬಾಗಿಲು ತಳ್ಳಿದಾಗ ಒಳಗಡೆಯಿಂದ ಸರಿಯಾಗಿ ಲಾಕ್ ಆಗದ ಕಾರಣ ತಕ್ಷಣ ಬಾಗಿಲು ತೆರೆದುಕೊಂಡಿದೆ. ಒಳಪ್ರವೇಶಿಸಿದ ನರೇಂದ್ರ ಅವರು ಬೆಡ್ರೂಂಗೆ ತೆರಳಿದಾಗ ಪತ್ನಿ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿರುವುದು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಪತ್ನಿಯನ್ನು ನೇಣಿನ ಕುಣಿಕೆಯಿಂದ ಇಳಿಸಿದಾಗ ಇನ್ನೂ ಉಸಿರಾಡುತ್ತಿರುವುದು ಕಂಡು ಬಂದಿದೆ.
ಇನ್ನು ಮಗು ನೀರಿನ ಟಬ್ನಲ್ಲಿ ಮಲಗಿರುವುದನ್ನು ಕಂಡು ತಕ್ಷಣ ಅಕ್ಕಪಕ್ಕದ ಕರೆದು ತಕ್ಷಣ ಗಾಯತ್ರಿ ಹಾಗೂ ಮಗು ಸಂಯುಕ್ತಳನ್ನು ಆಸ್ಪತ್ರೆಗೆ ದಾಖಲಿಸಿದರೂ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅರೆಜೀವವಾಗಿದ್ದ ಗಾಯತ್ರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಗಾಯತ್ರಿ ದೇವಿ ಬರೆದಿಟ್ಟಿರುವ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ಕೆಲ ವೈಯಕ್ತಿಕ ಕಾರಣಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಮಗುವಿನ ಜತೆ ನಾನೂ ಸಾಯುವ ನಿರ್ಧಾರ ಮಾಡಿದ್ದೇನೆ ಎಂದು ಬರೆಯಲಾಗಿದೆ.