ನವದೆಹಲಿ, ಆ 21 (DaijiworldNews/DB): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಬಲ್ಲರು ಎಂದು ಬಿಹಾರ ಉಪ ಮುಖ್ಯಮಂತ್ರಿ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದರ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಎಲ್ಲಾ ವಿಪಕ್ಷಗಳ ಪರವಾಗಿ ಮಾತನಾಡಲು ಆಗುವುದಿಲ್ಲ. ಆದರೆ ಎಲ್ಲಾ ಪ್ರತಿಪಕ್ಷಗಳು ನಿತೀಶ್ಕುಮಾರ್ ಅವರನ್ನು ಪರಿಗಣನೆಗೆ ತೆಗೆದುಕೊಂಡರೆ ಖಂಡಿತವಾಗಿಯೂ ಅವರು ಪ್ರಧಾನಿ ಹುದ್ದೆಗೆ ಪ್ರಬಲವಾದ ಅಭ್ಯರ್ಥಿಯೇ ಆಗಿದ್ದಾರೆ ಎಂದರು.
ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಕಳೆದೈದು ದಶಕಗಳಿಂದ ನಿತೀಶ್ಕುಮಾರ್ ಸಕ್ರಿಯವಾಗಿದ್ದಾರೆ. ಅವರ ಸಂಸದೀಯ ಮತ್ತು ಆಡಳಿತಾತ್ಮಕ ಅನುಭವ ಮೂರೂವರೆ ದಶಕಕ್ಕೂ ಮಿಗಿಲಾದುದು. ಮೀಸಲಾತಿ ಚಳುವಳಿಗಳಲ್ಲಿಯೂ ಪಾಲ್ಗೊಳ್ಳುವ ಮುಖಾಂತರ ನೊಂದವರ ಧ್ವನಿಯಾಗಿ ಕೆಲಸ ಮಾಡಿದ್ದಾರೆ ಎಂದರು.
ಬಿಹಾರದಲ್ಲಿ ಜಂಗಲ್ ರಾಜ್ ಮರಳಲಿದೆ ಎಂಬ ಬಿಜೆಪಿ ಆರೋಪದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನದಲ್ಲಿ ನಿರತವಾಗಿದೆ. ಆದರೆ ಅದರ ತಂತ್ರಗಳೆಲ್ಲ ಜನರಿಗೆ ಅರ್ಥವಾಗಿದೆ. ಮಿಥ್ಯ ಮಾಹಿತಿಗಳನ್ನು ಜನರಿಗೆ ನೀಡುವ ಬಿಜೆಪಿಯ ಪ್ರಯತ್ನವನ್ನು ಜನ ನಂಬಬಾರದು ಎಂದು ಮನವಿ ಮಾಡಿದರು.