ನವದೆಹಲಿ, ಆ 21 (DaijiworldNews/DB): ಅಬಕಾರಿ ನೀತಿ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ದ ಸಿಬಿಐ ಭಾನುವಾರ ಲುಕ್ಔಟ್ ನೊಟೀಸ್ ಜಾರಿಗೊಳಿಸಿದೆ. ಸಿಸೋಡಿಯಾ ಅವರೊಂದಿಗೆ ಇತರ 12 ಮಂದಿ ವಿರುದ್ದವೂ ಲುಕ್ಔಟ್ ನೊಟೀಸ್ ಹೊರಡಿಸಲಾಗಿದೆ.
468 ಖಾಸಗಿ ಬಾರ್ಗಳಿಗೆ ಅನುಮತಿ ನೀಡುವಾಗ ಅಕ್ರಮ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸಿಸೋಡಿಯಾ ವರ ನಿವಾಸದ ಮೇಲೆ ಕಳೆದ ಶುಕ್ರವಾರ ಸಿಬಿಐ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇದೀಗ ಅವರು ಸಹಿತ ಒಟ್ಟು 13 ಮಂದಿಯ ವಿರುದ್ದ ಲುಕ್ಔಟ್ ನೊಟೀಸ್ ಜಾರಿಗೊಳಿಸಲಾಗಿದ್ದು, ವಿದೇಶ ಪ್ರವಾಸ ಕೈಗೊಳ್ಳದಂತೆ ತಡೆ ಹಿಡಿಯಲಾಗಿದೆ.
ಇನ್ನು ಸಿಬಿಐ ಲುಕ್ಔಟ್ ನೊಟೀಸ್ ನೀಡಿರುವುದರ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿಸೋಡಿಯಾ, ಆಮ್ ಆದ್ಮಿ ಪಕ್ಷದ ರಾಜಕೀಯ ಬೆಳವಣಿಗೆಯನ್ನು ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಇದಕ್ಕಾಗಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ದೆಹಲಿ ಅಬಕಾರಿ ನೀತಿ ಪಾರದರ್ಶಕವಾಗಿಯೇ ಇದೆ. ಹಗರಣಗಳು ಇದರಲ್ಲಿ ಆಗಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಯಾವುದೇ ರೀತಿಯ ಪಿತೂರಿ ನಡೆಸಿದರೂ ಮುಂದಿನ ಲೋಕಸಭಾ ಚುನಾವಣೆಯು ಮೋದಿ ಮತ್ತು ಕೇಜ್ರೀವಾಲ್ ನಡುವೆಯೇ ನಡೆಯಲಿದೆ ಎಂದವರು ಟ್ವೀಟ್ ಮಾಡಿದ್ದಾರೆ.