ಮಥುರಾ, ಆ 20 (DaijiworldNews/MS): ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಶ್ವವಿಖ್ಯಾತ ಬಂಕೆ ಬಿಹಾರಿ ದೇವಸ್ಥಾನದಲ್ಲಿ ನಡೆದ ಮಂಗಳಾರತಿ ವೇಳೆ ಜನದಟ್ಟಣೆಯಿಂದ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಆಚರಿಸಲು ಭಕ್ತಾದಿಗಳು ಭಾರೀ ಪ್ರಮಾಣದಲ್ಲಿ ದೇವಾಲಯಕ್ಕೆ ಆಗಮಿಸಿದ್ದರಿಂದ ದೇವಾಲಯದಲ್ಲಿ ಭಾರೀ ಜನಸಂದಣಿ ಮಂಗಳಾರತಿ ವೇಳೆ ನೂಕುನುಗ್ಗಲು ಉಂಟಾಗಿ ಕೆಲವು ಭಕ್ತರ ಉಸಿರುಗಟ್ಟಿದೆ. ಈ ವೇಳೆ ಇಬ್ಬರು ಭಕ್ತರು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವೃಂದಾವನದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರನ್ನು ಮೃತರನ್ನು ನಿರ್ಮಲಾ ದೇವಿ ಮತ್ತು ರಾಮ್ ಪ್ರಸಾದ್ ವಿಶ್ವಕರ್ಮ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಸ್ತವವಾಗಿ, ಬಂಕೆ ಬಿಹಾರಿ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಂಗಳ ಆರತಿಯಲ್ಲಿ, ದೇವಾಲಯದ ಸಾಮರ್ಥ್ಯಕ್ಕಿಂತ ಹೆಚ್ಚು ಪಟ್ಟು ಭಕ್ತರು ಸೇರಿದ್ದರು. ಹೀಗಾಗಿ ನೂಕುನುಗ್ಗಲು ಉಂಟಾಗಿದೆ.
ದೇವಸ್ಥಾನದಲ್ಲಿನ ಅವಘಡದ ಸಂಭವಿಸಿದ ಬಳಿಕ , ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಭಕ್ತರ ಸಂಚಾರ ನಿರ್ಬಂಧಿಸಲಾಗಿದೆ.