ಪಣಜಿ, ಆ 19 (DaijiworldNews/DB): ಗೋವಾ, ಮಹಾರಾಷ್ಟ್ರ, ಕರ್ನಾಟಕ, ಹಿಮಾಚಲ ಪ್ರದೇಶದ ಕಾಂಗ್ರೆಸ್ನ ವಿವಿಧ ಶಾಸಕರು ಈಗಾಗಲೇ ಬಿಜೆಪಿಗೆ ಸೇರ್ಪಡೆಗೆ ಉತ್ಸುಕರಾಗಿದ್ದು, ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಪಕ್ಷ ದ ವರಿಷ್ಠರ ನಿರ್ಧಾರದ ಮೇರೆಗೆ ಮುಂದುವರಿಯಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಗೋವಾ ಉಸ್ತುವಾರಿ ಸಿ.ಟಿ. ರವಿ ಹೇಳಿದ್ದಾರೆ.
ಗೋವಾದಲ್ಲಿ ಆರಂಭವಾಗಿರುವ ಮೂರು ದಿನಗಳ ಬಿಜೆಪಿ ಪ್ರಮುಖ ನಾಯಕರ ವಸತಿ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಷ್ಟ್ರಪರ ಕಾರ್ಯಗಳಿಂದಾಗಿ ಅನೇಕ ರಾಜ್ಯಗಳ ಶಾಸಕರು ಪಕ್ಷದತ್ತ ಒಲವು ತೋರಿಸುತ್ತಿದ್ದಾರೆ. ಮಿಷನ್ ಕಮಲಕ್ಕೆ ಪುಷ್ಠಿ ನೀಡುವಂತೆ ಕೆಲವು ದಿನಗಳ ಹಿಂದೆ ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಗೆ ಹೊಂದಿರುವ ಒಲವಿನ ಬಗ್ಗೆ ಮಾತನಾಡುತ್ತಿದ್ದರು. ಮುಖ್ಯವಾಗಿ ಗೋವಾ, ಮಹಾರಾಷ್ಟ್ರ, ಕರ್ನಾಟಕ, ಹಿಮಾಚಲ ಪ್ರದೇಶ ಈ ನಾಲ್ಕು ರಾಜ್ಯಗಳ ಹಲವರು ಸಂಪರ್ಕದಲ್ಲಿದ್ದು, ಅಂತಿಮ ನಿರ್ಧಾರವನ್ನು ವರಿಷ್ಠರು ತಿಳಿಸಲಿದ್ದಾರೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಅಗತ್ಯವಿದೆ. ಭಾರತ ವಿಶ್ವಗುರುವಾಗಲು ಇದರ ಅನಿವಾರ್ಯವೂ ಇದೆ. ಬಿಜೆಪಿಯ ದೃಢ ನಾಯಕತ್ವ, ಸತ್ವಭರಿತ ಧ್ಯೇಯೋದ್ದೇಶ, ಉತ್ತಮ ನೀತಿಯೇ ಬಿಜೆಪಿಯೆಡೆಗೆ ಇತರ ಪಕ್ಷಗಳ ಶಾಸಕರು ಆಕರ್ಷಿತರಾಗಲು ಕಾರಣ ಎಂದವರು ತಿಳಿಸಿದರು.
ಕಾಂಗ್ರೆಸ್ ಜಾತಿವಾದ ಮತ್ತು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿರುವುದರಿಂದ ಜನ ಆ ಪಕ್ಷದತ್ತ ಒಲವು ಹೊಂದಿಲ್ಲ ಎಂದರು.