ಬೆಂಗಳೂರು, ಆ 16 (DaijiworldNews/MS): ರೌಡಿ ಶೀಟರ್ ಒಬ್ಬ, ಮಹಿಳಾ ಹೆಡ್ ಕಾನ್ ಸ್ಟೇಬಲ್ ಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೆಚ್ ಎಎಲ್ ಬಳಿಯ ಜ್ಯೋತಿ ನಗರದಲ್ಲಿ ಇಂದು ರೌಡಿ ಶೀಟರ್ ಶೇಕ್ ಶರೀಫ್ ಆಲಿಯಾಸ್ ಶರೀಫ್ (25) ಎಂಬಾತ, ಹೆಚ್ ಎಎಲ್ ಠಾಣೆಯ ಮಹಿಳಾ ಹೆಡ್ ಕಾನ್ ಸ್ಟೇಬಲ್ ವಿನುತಾ (40) ಎಂಬುವರಿಗೆ ಚಾಕುವಿನಿಂದ ಇರಿದಿದ್ದಾನೆ.
ಘಟನೆಯ ವಿವರ:
ರೌಡಿಶೀಟರ್ ಶೇಕ್ ಶರೀಫ್ ವಿರುದ್ದ ಹೆಚ್.ಎ.ಎಲ್. ಠಾಣೆಯಲ್ಲಿ ಕೊಲೆ ಹಾಗೂ ಕೊಲೆ ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಮತ್ತೆ ಕೊಲೆಗೆ ಸಂಚುರೂಪಿಸಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿದ್ದು, ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯಲು ಆಗಸ್ಟ್ 5 ರಂದು ಹೆಡ್ ಕಾನ್ಸ್ ಟೇಬಲ್ ವಿನುತಾ ಹಾಗೂ ಸಿಬ್ಬಂದಿ ವರ್ಗ ತೆರಳಿದ್ದಾರೆ.
ಈ ವೇಳೆ ಜ್ಯೋತಿ ನಗರದಿಂದ ರೆಡ್ಡಿಪಾಳ್ಯಕ್ಕೆ ಹೋಗಿರುವ ಮಾಹಿತಿ ಸಿಕ್ಕಿದ್ದ ಪೊಲೀಸರು ಆತನ ಬೆನ್ನಹತ್ತಿದ್ದರು. ರಾತ್ರಿ 9:30ಯ ವೇಳೆಗೆ ಠಾಣೆಗೆ ಕರೆದುಕೊಂಡು ಹೋಗಲು ಪೊಲೀಸ್ ಸಿಬ್ಬಂದಿ ಮುಂದಾದಾಗ ಡ್ರ್ಯಾಗರ್ ನಿಂದ ಇರಿದು ಪರಾರಿಗೆ ಯತ್ನಿಸಿದ್ದಾನೆ. ಸ್ಥಳೀಯರ ನೆರವಿನಿಂದ ಆರೋಪಿಯನ್ನು ಹಿಡಿದು ಪೋಲಿಸ್ ಠಾಣೆಗೆ ಕರೆ ತರಲಾಗಿದೆ. ಗಾಯಗೊಂಡ ಮಹಿಳಾ ಹೆಡ್ ಕಾನ್ಸ್ಟೇಬಲ್ ವಿನುತಾ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದು, ಹೆಚ್.ಎ.ಎಲ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.