ಅಣ್ಣುಪುರ್ (ಮಧ್ಯಪ್ರದೇಶ), ಆ 16 (DaijiworldNews/DB): ಭಾರೀ ಮಳೆಯಿಂದಾಗಿ ಸೇತುವೆ ಮುಳುಗಡೆಯಾದ ಪರಿಣಾಮ ಅಂತ್ಯಕ್ರಿಯೆಗಾಗಿ ಶವವನ್ನು ರಬ್ಬರ್ ಟ್ಯೂಬ್ಗೆ ಕಟ್ಟಿ ನದಿಯಲ್ಲಿ ತೇಲಿ ಬಿಟ್ಟು ದಡ ಸೇರಿಸಿರುವ ಘಟನೆ ಮಧ್ಯಪ್ರದೇಶದ ಅಣ್ಣುಪುರ್ನಲ್ಲಿ ನಡೆದಿದೆ.
ವಿಪರೀತ ಮಳೆಗೆ ಗ್ರಾಮಕ್ಕೆ ಕಲ್ಪಿಸಿದ್ದ ಸಂಪರ್ಕ ಸೇತುವೆ ನರ್ಮದಾ ನದಿಯ ಪ್ರವಾಹದಲ್ಲಿ ಮುಳುಗಡೆಯಾಗಿತ್ತು. ಇದರಿಂದಾಗಿ ಜನರು ಸೇತುವೆಯಾಚೆಗೆ ಸಂಚರಿಸುವುದೇ ಕಷ್ಟಸಾಧ್ಯವಾಗಿತ್ತು. ಇದೇ ಸಂಕಷ್ಟದ ಸಮಯದಲ್ಲಿ ಅನುಪ್ಪುರ್ನ ತಾಡಪಥರಾ ಗ್ರಾಮದ ನಿವಾಸಿ ವಿಶ್ಮತ್ ನಂದ (55) ಎಂಬವರು ಹೃದಯಾಘಾತದಿಂದ ಭಾನುವಾರ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆ ನೆರವೇರಿಸಲು ಸೇತುವೆ ದಾಟಿ ಹೋಗಬೇಕಿತ್ತಾದರೂ ಸೇತುವೆ ಇಲ್ಲದ ಕಾರಣ ನದಿ ದಾಟಲು ಸಾಧ್ಯವಾಗದೆ ಗ್ರಾಮಸ್ಥರ ಗುಂಪೊಂದು ಶವವನ್ನು ರಬ್ಬರ್ ಟ್ಯೂಬ್ಗೆ ಕಟ್ಟಿ ನದಿಯಲ್ಲಿ ತೇಲಿ ಬಿಟ್ಟು ದಡ ಸೇರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.
ಶವವನ್ನು ಪಥರಕುಚ ಗ್ರಾಮದವರೆಗೆ ಆಂಬ್ಯುಲೆನ್ಸ್ನಲ್ಲಿ ಕೊಂಡೊಯ್ಯಲಾಯಿತು, ಆದರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಮತ್ತು ಸೇತುವೆ ಮಳೆಯಿಂದ ಮುಳುಗಡೆಯಾದ ಕಾರಣ ಆಚೆ ಹೋಗಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.