ಬೆಂಗಳೂರು, ಆ 16 (DaijiworldNews/MS): ಎರಡೂ ಕಡೆ ನಿಮ್ಮದೇ ಸರ್ಕಾರ ಇದ್ದರೂ , ಪಿ.ಎಫ್.ಐ, ಎಸ್.ಡಿ.ಪಿ.ಐ ಸಂಘಟನೆಗಳನ್ನು ಯಾಕೆ ನಿಷೇಧ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು , "ಪಿ.ಎಫ್.ಐ, ಎಸ್.ಡಿ.ಪಿ.ಐ ಈ ಯಾವ ಸಂಘಟನೆಗಳೇ ಆಗಲಿ ಸಮಾಜದ ಸಾಮರಸ್ಯ ಹಾಳುಮಾಡುತ್ತಿವೆ, ಗಲಭೆಗಳಿಗೆ ಕಾರಣವಾಗುತ್ತಿವೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರ ಇದ್ದರೆ ಸರ್ಕಾರ ಅಂತಹಾ ಸಂಘಟನೆಗಳನ್ನು ನಿಷೇಧ ಮಾಡಲಿ. ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ನಿಮ್ಮದೆ ಸರ್ಕಾರ ಇದೆ. ಆದರೂ ಯಾಕೆ ಸುಮ್ಮನಿದ್ದೀರಿ" ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಬೊಮ್ಮಾಯಿ ಅವರು ಕರಾವಳಿಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಮಾತ್ರ ಹೋಗಿ ಪರಿಹಾರ ಕೊಟ್ಟಿದ್ದಾರೆ. ಮಸೂದ್ ಮತ್ತು ಫಾಜಿಲ್ ಕುಟುಂಬವನ್ನು ಭೇಟಿಯೂ ಮಾಡಿಲ್ಲ, ಪರಿಹಾರವನ್ನೂ ಘೋಷಿಸಿಲ್ಲ. ಸರ್ಕಾರದ ಬೊಕ್ಕಸದಿಂದ ನೀಡುವ ಪರಿಹಾರದಲ್ಲಿ ಇಂತಹಾ ತಾರತಮ್ಯ ಯಾಕೆ ಎಂದು ಕೇಳಿದ್ದಾರೆ.
ರಾಷ್ಟ್ರಧ್ವಜದ ಜಾಗದಲ್ಲಿ ಭಗವಾಧ್ವಜ ಹಾರಿಸುತ್ತೇವೆ ಎಂದು ಹೇಳಿದ ಈಶ್ವರಪ್ಪ ಅವರನ್ನು ಇನ್ನೂ ಪಕ್ಷದಲ್ಲಿಟ್ಟುಕೊಂಡು ಬಿಜೆಪಿ ನಾಯಕರು ನಮಗೆ ದೇಶಪ್ರೇಮದ ಪಾಠ ಮಾಡುವುದು ಆತ್ಮವಂಚನೆಯಾಗುತ್ತದೆ ಎಂದು ಹೇಳಿದ್ದಾರೆ.