ಬೆಂಗಳೂರು, ಆ 15 (DaijiworldNews/MS): ಸರ್ಕಾರಿ ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಚಿತ್ರ ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಟೀಕೆಗಳಿಗೆ ಬಿಜೆಪಿಯೂ ತಿರುಗೇಟು ನೀಡಿದ್ದುಕಾಂಗ್ರೆಸ್ ಪಕ್ಷಕ್ಕೆ ತನ್ನ ಯಜಮಾನ ನೆಹರೂ ಅವರನ್ನು ಗುರುತಿಸಲಾಗದಷ್ಟು ಮಂಪರು ಕವಿದಿದೆಯೇ ಎಂದು ಲೇವಡಿ ಮಾಡಿದೆ.
ಸರ್ಕಾರಿ ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಚಿತ್ರ ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. "ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ನೆಹರೂ ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು. ಈ ಅವಮಾನಕ್ಕಾಗಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.
ಇದೇ ವಿಚಾರವಾಗಿ ಕಾಂಗ್ರೆಸ್ ಗೆ ತಿರುಗೇಟು ನೀಡಿರುವ ಬಿಜೆಪಿ, ತನ್ನದೇ ಜಾಹಿರಾತು ರೀಟ್ವೀಟ್ ಮಾಡಿಕೊಂಡಿದ್ದು, ಅದರೊಂದಿಗೆ "ಕಾಂಗ್ರೆಸ್ ಪಕ್ಷಕ್ಕೆ ತನ್ನ ಯಜಮಾನ ನೆಹರೂ ಅವರನ್ನು ಗುರುತಿಸಲಾಗದಷ್ಟು ಮಂಪರು ಕವಿದಿದೆಯೇ? ಕಾಂಗ್ರೆಸ್ ಇಷ್ಟು ಬೇಗ ನೆಹರು ಮುಖ ಮರೆಯಿತೇ ಅಥವಾ ಇದು ಜಾಣ ಕುರುಡೋ?" ಎಂದು ಪ್ರಶ್ನಿಸಿದೆ.
ಸರ್ಕಾರಿ ಜಾಹಿರಾತಿನಲ್ಲಿ ನೆಹರೂ ಅವರ ಚಿತ್ರವಿದ್ದು, ಅದನ್ನು ಗುರುತಿಸಲಾಗದಷ್ಟರ ಮಟ್ಟಿಗೆ ಕಾಂಗ್ರೆಸ್ ಅವರನ್ನು ಮರೆತು ಹೋಗಿದೆ ಎಂದು ಟೀಕಿಸಿದೆ.