ಇಂಪಾಲ, ಆ 14 (DaijiworldNews/DB): ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದಂದು ಮಣಿಪುರದಲ್ಲಿ ದಾಳಿಗೆ ಸಂಚು ನಡೆಸಿದ್ದ ನಿಷೇಧಿತ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಸಂಘಟನೆಯ ಏಳು ಮಂದಿ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ವಿವಿಧ ಸ್ಥಳಗಳಿಂದ ಉಗ್ರರನ್ನು ಬಂಧಿಸಲಾಗಿದೆ. ಸರ್ಕಾರಿ ಕಚೇರಿ ಹಾಗೂ ಭದ್ರತಾ ಪಡೆಯನ್ನು ಗುರಿಯಾಗಿಸಿ ಸ್ವಾತಂತ್ರ್ಯ ದಿನಾಚರಣೆಯಂದು ದಾಳಿಗೆ ಸಂಚು ರೂಪಿಸಲಾಗಿತ್ತು. ಅಸ್ಸಾಂ ರೈಫಲ್ಸ್ಗೆ ಶನಿವಾರ ಬೆಳಗ್ಗೆ ಈ ಸಂಬಂಧ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತೌಬಲ್ ಜಿಲ್ಲಾ ಪೊಲೀಸ್ ಹಾಗೂ 16 ಅಸ್ಸಾಂ ರೈಫಲ್ಸ್ನ ತಂಡವು ಯೈರಿಪಾಕ್ ಬಜಾರ್ನಲ್ಲಿ ಜಂಟಿ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಇಂಪಾಲ ಪೂರ್ವ, ಇಂಪಾಲ ಪಶ್ಚಿಮ, ಕಕಚಿಂಗ್ ಮತ್ತು ತೌಬಲ್ ಪ್ರದೇಶಗಳಲ್ಲಿ ಉಗ್ರರಿಗಾಗಿ ಶೋಧ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯು ಏಳು ಮಂದಿ ಉಗ್ರರನ್ನು ಬಂಧಿಸಿದ್ದು, ಶಸ್ತ್ರಾಸ್ತ್ರ, ಸ್ಫೋಟಕ ಹೊಂದಿದ್ದ ಬಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತೌಬಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಚ್. ಜೋಗೇಶ್ ಚಂದ್ರ ತಿಳಿಸಿದ್ದಾರೆ.
ಉಗ್ರರ ಸಂಚು ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.