ದಾವಣಗೆರೆ, ಆ 14 (DaijiworldNews/DB): ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ತಗುಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಬಿ.ಆರ್. ರವಿಶಂಕರ್ (35) ಮತ್ತು ನಾಗವೇಣಿ (32 ವ) ಮೃತ ದಂಪತಿ. ದಾವಣಗೆರೆ ತಾಲೂಕಿನ ಬಾವಿಹಾಳು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮನೆ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಕಟ್ಟಿದ ತಂತಿಯಲ್ಲಿ ನಾಗವೇಣಿ ಬಟ್ಟೆ ಒಣಗಲು ಹಾಕಿದ್ದರು. ಈ ವೇಳೆ ವಿದ್ಯುತ್ ತಂತಿ ತಗುಲಿದ್ದು ಕೂಡಲೇ ಕೂಗಿದ್ದಾರೆ. ಆಗ ಮನೆಯಲ್ಲಿದ್ದ ಪತಿ ರವಿಶಂಕರ್ ಓಡಿ ಬಂದು ಪತ್ನಿಯನ್ನು ಎಳೆಯಲು ಮುಂದಾಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಪ್ರವಹಿಸಿದೆ. ಇದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರವಿಶಂಕರ್ ಕೃಷಿಕರಾಗಿ ಹಾಗೂ ನಾಗವೇಣಿ ಗೃಹಿಣಿಯಾಗಿದ್ದರು. ಒಂದು ಗಂಡು ಮತ್ತು ಒಂದು ಹೆಣ್ಣು ಮಗುವನ್ನು ದಂಪತಿ ಅಗಲಿದ್ದಾರೆ. ಮಾಯಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.