ನವದೆಹಲಿ, ಆ 13 (DaijiworldNews/DB): ಭಾರತ ಮಾತ್ರವಲ್ಲ ಇತರ ದೇಶಗಳ ಜನರಿಗೂ ಯದ್ದಭೂಮಿಯಿಂದ ಹೊರ ಬರಲು ರಕ್ಷಣಾತ್ಮಕ ಗುರಾಣಿಯಾಗಿ ನಮ್ಮ ತ್ರಿವರ್ಣ ಧ್ವಜ ಮಾರ್ಪಟ್ಟಿದೆ. ತ್ರಿವರ್ಣ ಧ್ವಜದ ಶಕ್ತಿಯನ್ನು ಈಗ ಇಡೀ ಜಗತ್ತು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರಾದವರನ್ನು ತಮ್ಮ ನಿವಾಸದಲ್ಲಿ ಭೇಟಿಯಾದ ನಂತರ ಮಾತನಾಡಿದ ಅವರು, ತ್ರಿವರ್ಣ ಧ್ವಜದ ಶಕ್ತಿ ಏನೆಂಬುದನ್ನು ಇತ್ತೀಚೆಗೆ ಉಕ್ರೇನ್ನಲ್ಲಿ ನೋಡಿದ್ದೆವು. ಯುದ್ದಭೂಮಿಯಿಂದ ಹೊರ ಬರಲು ವಿದೇಶಿಗರು ಭಾರತದ ತ್ರಿವರ್ಣ ಧ್ವಜವನ್ನು ರಕ್ಷಣಾತ್ಮಕ ಗುರಾಣಿಯಾಗಿ ಹಿಡಿದುಕೊಂಡಿದ್ದರು ಎಂದು ಸ್ಮರಿಸಿದರು.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅದೇ ರೀತಿ ಚೆಸ್ ಒಲಿಂಪಿಯಾಡ್ನ್ನು ನಮ್ಮ ದೇಶ ಆಯೋಜಿಸುವ ಮೂಲಕ ಕೆಲವು ವಾರಗಳಲ್ಲಿ ಎರಡು ದೊಡ್ಡ ಸಾಧನೆ ನಮ್ಮದಾಗಿದೆ. ಎಷ್ಟೇ ಕೆಲಸಗಳಿದ್ದರೂ ಬಿಡುವು ಮಾಡಿಕೊಂಡು ಕ್ರೀಡಾಕೂಟದ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ಅಲ್ಲಿ ನೀವು ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಇಲ್ಲಿ ಕ್ರೀಡಾಭಿಮಾನಿಗಳು ಭಾರತೀಯ ಕ್ರೀಡಾಪಟುಗಳ ಸಾಧನೆ ಸಂಭ್ರಮಿಸಲು ಅಲಾರಂ ಇಟ್ಟು ಏಳುತ್ತಿದ್ದರು ಎಂದರು.
ನಮ್ಮ ಕ್ರೀಡಾ ಸಾಮರ್ಥ್ಯವನ್ನು ಬಲಪಡಿಸುವುದರೊಂದಿಗೆ ಹೊಸ ಕ್ರೀಡೆಗಳಲ್ಲಿಯೂ ನಾವು ನಮ್ಮದೇ ಆದ ಛಾಪು ಮೂಡಿಸುತ್ತಿದ್ದೇವೆ. ಭಾರತೀಯ ಆಟ ಹಾಕಿಯ ಪರಂಪರೆಯನ್ನು ಮರಳಿ ಪಡೆಯುತ್ತಿರುವ ರೀತಿ ಮತ್ತು ಪ್ರಯತ್ನಕ್ಕೆ ಹೆಮ್ಮೆಯಾಗುತ್ತಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.
ಬಾಕ್ಸಿಂಗ್, ಜೂಡೋ, ಕುಸ್ತಿಯಲ್ಲಿ ಹೆಣ್ಣು ಮಕ್ಕಳು ಪ್ರಾಬಲ್ಯ ಸಾಧಿಸಿದ ರೀತಿ ನೋಡಿ ಇಡೀ ದೇಶವೇ ಮೆಚ್ಚಿಕೊಂಡಿದೆ. ಕೇವಲ ಪದಕವಲ್ಲ, ಭಾರತಕ್ಕೆ ಹೆಮ್ಮೆಯನ್ನೂ ತರುತ್ತಿದ್ದೀರಿ. 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬ ಪರಿಕಲ್ಪನೆಯನ್ನು ಸಶಕ್ತಗೊಳಿಸುತ್ತಿರುವ ನಮ್ಮ ಕ್ರೀಡಾಪಟುಗಳ ಸಾಧನೆ ಅಸಾಧಾರಣವಾದುದು ಎಂದರು.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಸೇರಿದಂತೆ ಒಟ್ಟು 61 ಪದಕಗಳನ್ನು ಗೆದ್ದುಕೊಂಡಿತ್ತು.