ಬೆಂಗಳೂರು, ಆ 12 (DaijiworldNews/MS): ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕೆಲಸ ಸಿಗಬೇಕಾದರೆ ಯುವತಿಯರು ಮಂಚ ಹತ್ತಬೇಕು,ಯುವಕರಾದರೆ ಲಂಚ ಕೊಡಬೇಕು ಎಂಬ ಮಾಜಿ ಸಚಿವ ಪ್ರಿಯಾಂಕ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಇದಕ್ಕೆ ಬಿಜೆಪಿ ಮುಖಂಡರು ಕಿಡಿಕಾರುತ್ತಿದ್ದಾರೆ.
ಈ ವಿಚಾರವಾಗಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ ನಾನು 'ಲಂಚ ಮಂಚದ ಸರ್ಕಾರ' ಎಂದಿದ್ದಕ್ಕೆ ಬಿಜೆಪಿಯವರಿಗೆ ಉರಿ ಬಿದ್ದಿದೆ! ಸತ್ಯ ಆ ಮಟ್ಟಿಗೆ ಕಹಿಯಾಗಿರುತ್ತದೆ! ಬಿಜೆಪಿಯಲ್ಲಿ ಲಂಚ, ಮಂಚದ ಪುರಾಣವಿರದಿದ್ದರೆ ಒಬ್ಬ ಕೇಂದ್ರ ಸಚಿವರು, ಇನ್ನೊಬ್ಬ ರಾಜ್ಯ ಸಚಿವರು ರಾಜೀನಾಮೆ ನೀಡಿದ್ದೇಕೆ? ಬಿಜೆಪಿ ಸಂಸದರು, ಮಂತ್ರಿಗಳು,ಶಾಸಕರು ಕೋರ್ಟಿನಲ್ಲಿ ಸಾಲು ಸಾಲು ತಡೆಯಾಜ್ಞೆ ತಂದಿದ್ದೇಕೆ? ಎಂದು ಪ್ರಶ್ನಿಸುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಕಲಬುರ್ಗಿಯಲ್ಲಿ ಹೇಳಿಕೆ ನೀಡಿದ್ದ ಪ್ರಿಯಾಂಕ ಖರ್ಗೆ, 40% ಕಮೀಷನ್ ಸರ್ಕಾರದಲ್ಲಿ ಅಭಿವೃದ್ಧಿ ಅನ್ನುವುದೇ ಇಲ್ಲ. ಯುವ ಜನತೆಗೆ ಕೆಲಸ ಇಲ್ಲ.ಇದೊಂದು ಲಂಚ & ಮಂಚದ ಸರ್ಕಾರ . ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಈಗ ಜನರನ್ನು ಬೀದಿಯಲ್ಲಿ ನಿಲ್ಲಿಸಿದೆ ಎಂದು ದೂರಿದ್ದರು.