ಬೆಂಗಳೂರು, ಆ 12 (DaijiworldNews/MS): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚಿಸಿದ್ದ ಎಸಿಬಿಯನ್ನು ರದ್ದುಪಡಿಸಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೇ ರಾಜ್ಯ ಬಿಜೆಪಿ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ವಿರುದ್ದ ಮುಗಿಬಿದ್ದಿದೆ. ಕಾಂಗ್ರೆಸ್ ಭ್ರಷ್ಟರನ್ನು ರಕ್ಷಿಸಿಕೊಳ್ಳುವುದೇ ಎಸಿಬಿ ರಚನೆಯ ಮೂಲ ಉದ್ದೇಶವಾಗಿತ್ತು ಎಂದು ಕಿಡಿಕಾರಿದೆ.
" ಸ್ವತಂತ್ರ ತನಿಖಾ ಸಂಸ್ಥೆಯಾದ ಎಸಿಬಿ ದೇಶದ ಅನೇಕ ರಾಜ್ಯಗಳಲ್ಲೂ ಇತ್ತು, ಅದರಂತೆ ನಮ್ಮ ರಾಜ್ಯದಲ್ಲೂ ಸ್ಥಾಪಿಸಲಾಗಿತ್ತು. ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ಎಸಿಬಿ ಯನ್ನು ರದ್ದುಪಡಿಸಿ ಆದೇಶ ನೀಡಿದೆ, ನ್ಯಾಯಾಲಯದ ಈ ಆದೇಶವನ್ನು ನಾನು ಗೌರವಿಸುತ್ತೇನೆ " ಎಂದು ಸಿದ್ದರಾಮಯ್ಯ ತೀರ್ಪಿನ ಬೆನ್ನಲ್ಲೇ ಟ್ವೀಟ್ ಮಾಡಿದ್ದರು.
ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿದ ಬಿಜೆಪಿ ,ಸಿದ್ದರಾಮಯ್ಯನವರೇ, ಸ್ವತಂತ್ರ ತನಿಖಾ ಸಂಸ್ಥೆಯಾದ ಎಸಿಬಿ ದೇಶದ ಅನೇಕ ರಾಜ್ಯಗಳಲ್ಲೂ ಇದ್ದಿರಬಹುದು. ಆದರೆ, ರಾಜ್ಯದಲ್ಲೂ ಸ್ಥಾಪಿಸಿದ್ದು ಮಾತ್ರ ನಿಮ್ಮ ಮೇಲಿನ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಲು. ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ ಜೈಲೂಟ ತಿನ್ನುತ್ತಿದ್ದರು ಎಂದು ಲೇವಡಿ ಮಾಡಿದೆ.
ಸಿದ್ದರಾಮಯ್ಯ ವಿರುದ್ಧ ಹ್ಯೂಬ್ಲೋಟ್ ವಾಚ್ ಪ್ರಕರಣ ಲೋಕಾಯುಕ್ತದಲ್ಲಿ ದಾಖಲಾಗಿತ್ತು. ಜೈಲು ಖಾಯಂ ಎಂದರಿತ ಸಿದ್ದರಾಮಯ್ಯ ಲೋಕಾಯುಕ್ತವನ್ನು ವಿಸರ್ಜಿಸಿ ಎಸಿಬಿ ರಚನೆ ಮಾಡಿ, ತನಗೆ ತಾನೇ ಕ್ಲೀನ್ ಚಿಟ್ ಕೊಟ್ಟುಕೊಂಡರು. ಕಾಂಗ್ರೆಸ್ ಭ್ರಷ್ಟರನ್ನು ರಕ್ಷಿಸಿಕೊಳ್ಳುವುದೇ ಎಸಿಬಿ ರಚನೆಯ ಮೂಲ ಉದ್ದೇಶವಾಗಿತ್ತು. ಎಸಿಬಿ ರಚಿಸಿ, ಲೋಕಾಯುಕ್ತದಿಂದ ಅಧಿಕಾರ ಕಿತ್ತುಕೊಂಡು ತನಿಖಾ ಸಂಸ್ಥೆಯನ್ನೇ ಹಲ್ಲಿಲ್ಲದ ಹಾವು ಮಾಡಿದ ಕೀರ್ತಿ ಆಗಿದ್ದ ಕರ್ನಾಟಕ ಕಾಂಗ್ರೆಸ್ಸರ್ಕಾರಕ್ಕೆ ಸಲ್ಲುತ್ತದೆ.
ಎಸಿಬಿ ರಚನೆ ಕರ್ನಾಟಕದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ. ತಮ್ಮನ್ನು ರಕ್ಷಿಸಲು ಸಿದ್ದರಾಮಯ್ಯಹೆಣೆದ ಕುಟಿಲ ತಂತ್ರಕ್ಕೆ ನ್ಯಾಯಾಂಗ ಛಡಿಯೇಟು ನೀಡಿದೆ. ಅರ್ಕಾವತಿ ರೀಡು ಪ್ರಕರಣವೂ ಸೇರಿದಂತೆ ಸಿದ್ದರಾಮಯ್ಯ ಕಾಲದ ಹಲವು ಭ್ರಷ್ಟಾಚಾರ ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿದ್ದವು.
ಜೈಲು ಶಿಕ್ಷೆ ತಪ್ಪಿಸಿಕೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಹಾಡಹಗಲೇ ಲೋಕಾಯುಕ್ತದ ಕಗ್ಗೊಲೆ ನಡೆಸಿದರು.ಹೈಕೋರ್ಟ್ ತನ್ನ ತೀರ್ಪಿನ ಮೂಲಕ ಸಿದ್ದರಾಮಯ್ಯ ಅವರಿಗೆ ಕಪಾಳಮೋಕ್ಷ ಮಾಡಿದೆ. ಲೋಕಾಯುಕ್ತವನ್ನು ನಾಶ ಮಾಡಲು ಸಿದ್ದರಾಮಯ್ಯ ಅವರು ವಿಧಾನಸಭೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ಪ್ರಜಾಪ್ರಭುತ್ವದ ಕ್ರೂರ ಅಣಕ. ಇಷ್ಟರ ಮೇಲೂ ಅನ್ಯ ರಾಜ್ಯಗಳಲ್ಲಿ ಎಸಿಬಿ ಇಲ್ಲವೇ ಎಂದು ಅವರು ಮಾಡಿಕೊಳ್ಳುವ ನಿರ್ಲಜ್ಜ ಸಮರ್ಥನೆ ಅಕ್ಷಮ್ಯ ಎಂದು ಬಿಜೆಪಿ ಕಿಡಿಕಾರಿದೆ.