ತುಮಕೂರು, ಆ 11 (DaijiworldNews/DB): ತೆಲುಗಿನ ಅರುಂಧತಿ ಸಿನಿಮಾದಿಂದ ಪ್ರಭಾವಿತನಾಗಿ ಯುವಕನೊಬ್ಬ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಘಟನೆ ಮಧುಗಿರಿ ತಾಲೂಕಿನ ಗಿಡ್ಡನಪಾಳ್ಯದಲ್ಲಿ ನಡೆದಿದೆ.
ಗಿಡ್ಡನಪಾಳ್ಯದ ರೇಣುಕಯ್ಯ ಬೆಂಕಿ ಹಚ್ಚಿಕೊಂಡ ಯುವಕ. ಎಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದ ಈತನನ್ನು ತುಮಕೂರಿನಲ್ಲಿ ಕಾಲೇಜಿಗೆ ಸೇರಿಸಲಾಗಿತ್ತು. ಅಲ್ಲಿ ಹಾಸ್ಟೆಲ್ನಲ್ಲಿದ್ದ ಈತ ಇತರ ವಿದ್ಯಾರ್ಥಿಗಳೊಂದಿಗೆ ಸೇರಿ ಸಿನಿಮಾ ಗೀಳು ಹತ್ತಿಸಿಕೊಂಡಿದ್ದ. ತೆಲುಗಿನ ಅರುಂಧತಿ ಸಿನಿಮಾವನ್ನು ಆಗಾಗ ವೀಕ್ಷಿಸುತ್ತಿದ್ದ. ಇದರಿಂದ ವಿದ್ಯಾಭ್ಯಾಸವನ್ನೂ ಬಿಟ್ಟು ಮನೆಗೆ ಬಾರದೆ ತುಮಕೂರಿನಲ್ಲಿಯೇ ಉಳಿದುಕೊಂಡಿದ್ದ.
ಕಳೆದ ಭಾನುವಾರ ಊರಿಗೆ ಬಂದಿದ್ದು, ಈತನಿಗೆ ಈ ವೇಳೆ ಹೆತ್ತವರು ಸಾಕಷ್ಟು ಬುದ್ದಿವಾದ ಹೇಳಿದ್ದಾರೆ. ಆದಾಗ್ಯೂ ಸಿನಿಮಾ ನೋಡುವುದನ್ನು ಬಿಟ್ಟಿರಲಿಲ್ಲ. ಅರುಂಧತಿ ಸಿನಿಮಾದ ಕೊನೆಯಲ್ಲಿ ಬೆಂಕಿಗೆ ಆಹುತಿಯಾಗುವ ದೃಶ್ಯವಿದ್ದು, ಅದನ್ನು ಪದೇ ಪದೇ ನೋಡಿ ಅದೇ ರೀತಿ ಬೆಂಕಿ ಹಚ್ಚಿಕೊಳ್ಳಲು ಯೋಜಿಸಿದ್ದ. ಅದಕ್ಕಾಗಿ 20 ಲೀಟರ್ ಪೆಟ್ರೋಲ್ ಖರೀದಿಸಿದ್ದ. ಅಲ್ಲದೆ ಒಂದು ಜೊತೆ ಬಟ್ಟೆಯನ್ನೂ ಖರೀದಿಸಿದ್ದ. ಬಳಿಕ ಬುಧವಾರ ಸಂಜೆ ರೇಷ್ಮೆ ಇಲಾಖೆ ನರ್ಸರಿ ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಬೆಂಕಿ ಹೊತ್ತಿಕೊಂಡಿದ್ದರಿಂದ ಉರಿ ತಡೆಯಲಾರದೆ ರಸ್ತೆಗೋಡಿ ಬಂದು ಕಾಪಾಡುವಂತೆ ಗೋಳಾಡಿದ್ದಾನೆ. ಕೂಡಲೇ ಈತನನ್ನು ಸ್ಥಳದಲ್ಲಿದ್ದವರು ರಕ್ಷಿಸಿ ಆಂಬುಲೆನ್ಸ್ ಮೂಲಕ ಮಧುಗಿರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.