ನವದೆಹಲಿ, ಆ 07 (DaijiworldNews/DB): ಗುಂಪೊಂದು ಪೊಲೀಸ್ ಠಾಣೆಗೆ ನುಗ್ಗಿ ಸಿಬಂದಿಗೆ ಥಳಿಸಿದ ಘಟನೆ ದೆಹಲಿಯ ಆನಂದ್ ವಿಹಾರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ದಾಳಿಯ ಪ್ರಮುಖ ಆರೋಪಿ ಕರ್ಕರ್ದೂಮ ಗ್ರಾಮದ ನಿವಾಸಿ ಸತೀಶ್ ಚೌಧರಿ (29) ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಾಳಿ ವೇಳೆ ಪೊಲೀಸ್ ಸಿಬಂದಿಯ ಸಹಾಯಕ್ಕೆ ಬರುವ ಬದಲು ಸುತ್ತಮುತ್ತಲಿನ ಜನರು ವೀಡಿಯೋ ಮಾಡುವುದರಲ್ಲಿ ತಲ್ಲೀನರಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಕರ್ಕರ್ದೂಮ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಆಕೆಯ ಚಿನ್ನದ ಸರವನ್ನು ಮುರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಅಂಚಲ್ ಬಕ್ಸಿ ಮತ್ತು ಅಜಯ್ ಎಂಬವರ ಮೇಲೆ ದೂರು ದಾಖಲಾಗಿತ್ತು. ಈ ಕುರಿತು ಸ್ಥಳಕ್ಕೆ ತೆರಳಿ ಪಾನಮತ್ತನಾಗಿದ್ದ ಅಜಯ್ನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಆತನ ಸಹೋದರ ಸತೀಶ್ ಚೌಧರಿ ಮತ್ತಿತರರು ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ಸಂದರ್ಭ ಅಲ್ಲಿಗೆ ಬಂದ ಪೊಲೀಸ್ ಕಾನ್ಸ್ಟೇಬಲ್ ಪ್ರಕಾಶ್ ಅವರನ್ನು ಆರೋಪಿಗಳು ಸುತ್ತುವರಿದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಶಹ್ದಾರಾ) ಆರ್. ಸತ್ಯಸುಂದರಂ ಮಾಹಿತಿ ನೀಡಿದ್ದಾರೆ.
ಗಾಯಾಳು ಪೊಲೀಸರಿಗೆ ಕೂಡಲೇ ವೈದ್ಯಕೀಯ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇತರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.