ಬೆಂಗಳೂರು, ಆ 05 (DaijiworldNews/HR): ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸುವ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ತಮ್ಮ 80 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ನಕಲಿ ಗಾಂಧಿ ಕುಟುಂಬಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಿರುವ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ತನಿಖೆ ನಡೆಸುತ್ತಿರುವಾಗ ಕಾಂಗ್ರೆಸ್ ಪಕ್ಷ ಮೌನವಾಗಿದೆ. ಏಕೆ ಈ ತಾರತಮ್ಯ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ನಕಲಿ ಗಾಂಧಿಗಳು ತನಿಖಾ ಸಂಸ್ಥೆಯ ಎದುರು ವಿಚಾರಣೆಗೆ ಹಾಜರಾದಾಗ ಕಾಂಗ್ರೆಸ್ ಪಕ್ಷ ಆಕಾಶ ಭೂಮಿ ಒಂದಾಗುವಂತೆ ಪ್ರತಿಭಟಿಸಿತು. ಆದರೆ ಈಗ ದಲಿತ ನಾಯಕ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಜಾರಿ ನಿರ್ದೇಶನಾಲಯದ ಎದುರು ಕುಳಿತಾಗ ಕಾಂಗ್ರೆಸ್ ದಿವ್ಯ ಮೌನ ಅನುಸರಿಸುತ್ತಿದೆ. ಏಕೆ ಈ ದ್ವಂದ್ವ ನೀತಿ ಎಂದು ಪ್ರಶ್ನಿಸಿದೆ.
ಇನ್ನು ಸಿದ್ದರಾಮಯ್ಯ, ಡಿಕೆಶಿ ಆದಿಯಾಗಿ ಕಾಂಗ್ರೆಸ್ ನಾಯಕರೆಲ್ಲರೂ 75 ರ ಈ ಇಳಿ ಹರೆಯದಲ್ಲೂ ಸೋನಿಯಾ ಇಡಿ ವಿಚಾರಣೆಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮರುಕ ಪಟ್ಟರು. ದುರಂತ ನಾಯಕ ಖರ್ಗೆ 80 ವರ್ಷ ದಾಟಿದ್ದಾರೆ, ದುಃಖಿಸುವವರೇ ಇಲ್ಲ! ದಲಿತ ಎಂಬ ಕಾರಣಕ್ಕಾಗಿ ಇಷ್ಟೊಂದು ನಿಕೃಷ್ಟವೇ? ಎಂದು ಕೇಳಿದೆ.