ಬೆಂಗಳೂರು, ಆ 05 (DaijiworldNews/DB): ಕೈ ಮಗ್ಗ ಕಸುಬುಗಳ ಹೆಚ್ಚು ಉತ್ಪಾದನೆಯೊಂದಿಗೆ ಅದರ ಲಾಭ ನೇಕಾರರಿಗೆ ಮುಟ್ಟಿದಾಗ ಆತ್ಮನಿರ್ಭರ್ ಭಾರತ್ ನಿರ್ಮಾಣ ಸಾಕಾರವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಿರುವ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ಘಾಟಿಸಿ ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೈ ಮಗ್ಗ ಸ್ವಾವಲಂಬನೆಯ ಸಂಕೇತ. ಬಟ್ಟೆ ವ್ಯಾಪಾರವು ಬ್ರಿಟಿಷರ ಪ್ರಮುಖ ಉದ್ಯಮವಾಗಿತ್ತು. ಹೀಗಾಗಿ ನಮ್ಮ ಬಟ್ಟೆಗಳನ್ನು ನಾವೇ ತಯಾರಿಸಿಕೊಳ್ಳುವಂತೆ ಮಹಾತ್ಮಗಾಂಧೀಜಿಯವರು ಕರೆ ನೀಡಿದ್ದರು. ಇಂಗ್ಲೆಂಡ್ ಮಿಲ್ಗಳ ಬದಲಾಗಿ ನಮ್ಮ ಬಟ್ಟೆ ನಾವೇ ನೇಯುವ ಕೈಮಗ್ಗ, ಚರಕಕ್ಕೆ ಜನ ಜೈ ಎಂದಿದ್ದರು. ಇದ ಸ್ವಾತಂತ್ರ್ಯ ಹೋರಾಟಕ್ಕೂ ಪ್ರೇರಣೆ ಎಂದವರು ಸ್ಮರಿಸಿದರು.
ಗಾಂಧೀಜಿ ಕನಸನ್ನು ಈಡೇರಿಸುವ ಕೈಮಗ್ಗ ಕ್ಷೇತ್ರದಲ್ಲಿ ಇಂದು ಬಹಳಷ್ಟು ಬೆಳವಣಿಗೆಗಳಾಗಿವೆ. ತಂತ್ರಜ್ಞಾನದ ಬಳಕೆಯೂ ಇಲ್ಲಾಗಿದೆ. ಆಧುನೀಕರದ ಸಹಾಯವು ನೇಕಾರರ ದುಡಿಮೆಯ ದಣಿವನ್ನು ನೀಗಿಸಿದೆ. ಖಾದಿ, ಗ್ರಾಮೋದ್ಯೋಗ, ಕೈಮಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರೂ ಮನ್ನಣೆ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ನಮ್ಮ ದೇಶೀಯ ಉತ್ಪನ್ನಗಳನ್ನು ನಾವು ಬಳಸಿದರೆ ಆತ್ಮನಿರ್ಭರ್ ಭಾರತದ ಸಾಕಾರವಾಗುತ್ತದೆ. ನಮ್ಮದೇ ದೇಶದ ಪ್ರತಿಯೊಬ್ಬರಿಗೂ ಲಾಭವಾಗಬೇಕೆನ್ನುವುದು ಇದರ ಉದ್ದೇಶ. ನೇಕಾರರ ಸುಮಾರು 50 ಸಾವಿರಕ್ಕಿಂತ ಹೆಚ್ಚು ಮಂದಿ ಮಕ್ಕಳಿಗೆ ಈಗಾಗಲೇ ಸರ್ಕಾರ ವಿದ್ಯಾನಿಧಿಯನ್ನು ಪ್ರಾರಂಭಿಸಿದ್ದು, ಇದರಡಿ ಹೆಣ್ಣು ಮಕ್ಕಳಿಗೆ 8ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೂ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ನೇಕಾರರ ಸಮ್ಮಾನ್ ಯೋಜನೆಯ ಮೊತ್ತವನ್ನು 5 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಅನೇಕ ವರ್ಷಗಳಿಂದ ಇರುವ ಬಡ್ಡಿ ರಿಯಾಯಿತಿ, ಸಾಲ ಮನ್ನಾ ಮಾಡಲಾಗಿದೆ ಎಂದರು.