ಮಂಗಳೂರು, 04 (DaijiworldNews/SM): ಮಡಿಕೇರಿ ಸಂಪಾಜೆ ನಡುವಿನ ಕೋಯನಾಡು ಎಂಬಲ್ಲಿ ರಸ್ತೆಯಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ನಡುವೆ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಬಸ್ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ. ತಾತ್ಕಾಲಿಕವಾಗಿ ಘನ ವಾಹನ ಸಂಚಾರಕ್ಕೆ ಮಡಿಕೇರಿ ಮೂಲಕ ಅನುಮತಿ ಇಲ್ಲ.
ಈ ಹಿನ್ನೆಲೆ ಬೆಂಗಳೂರು ಮಂಗಳೂರು ನಡುವೆ ಸಂಚಾರ ನಡೆಸುವ ಬಸ್ ಗಳಿಗೆ ಹಾಸನ ಜಿಲ್ಲಾಧಿಕಾರಿ ಗಿರೀಶ್ ಅವರು ಪರ್ಯಾಯ ಮಾರ್ಗ ಸೂಚಿಸಿದ್ದಾರೆ. ಹಾಸನ ಜಿಲ್ಲೆಯ ಮಾರಣಹಳ್ಳಿಯಿಂದ ದೋಣಿಗಾಲ್ ಮೂಲಕ ಮಂಗಳೂರಿನತ್ತ ಸಂಚಾರ ನಡೆಸಲು ಅವಕಾಶ ಕಲ್ಪಿಸಿದ್ದಾರೆ. ಈ ಮಾರ್ಗದ ಮೂಲಕ ಖಾಸಗಿ, ಸರ್ಕಾರಿ ಬಸ್ ಗಳು, ರಾಜಹಂಸ, ಐರಾವತ, ಅಂಬಾರಿ, ಡ್ರೀಮ್ ಕ್ಲಸ್ ಸ್ಲೀಪರ್, ನಾನ್ ಎಸಿ, ಸ್ಲೀಪರ್, ಸ್ಕ್ಯಾನಿಯಾ ಮತ್ತು ಮಲ್ಟಿ ಆಕ್ಸೆಲ್, ಮೋಲ್ಟೋ ಬಸ್ ಗಳು ಸಂಚಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸಂಜೆ ೬:೦೦ ರಿಂದ ಬೆಳಗ್ಗೆ:೬:೦೦ ಗಂಟೆಯವರೆಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ.