ಬೆಂಗಳೂರು, ಆ 04 (DaijiworldNews/DB): 'ವ್ಯಾಪಾರಂ ದ್ರೋಹ ಚಿಂತನಂ' ಎಂಬ ಮಾತಿದೆ, ಅಂತೆಯೇ ವ್ಯಾಪಾರಿ ಪಕ್ಷ ಬಿಜೆಪಿಯು ಹಣ ಕೊಳ್ಳೆ ಹೊಡೆಯಲು ಕಳಪೆ ಧ್ವಜ ಮಾರಾಟದ ಮೂಲಕ ರಾಷ್ಟ್ರಧ್ವಜಕ್ಕೆ, ದೇಶಕ್ಕೆ ದ್ರೋಹವೆಸಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿಯ ಹಣದಾಹಕ್ಕೆ ರಾಷ್ಟ್ರಧ್ವಜ ವಿರೂಪವಾಗುತ್ತಿರುವುದು ಸಹಿಸಲಾಗದ ಸಂಗತಿ. ಬಿಜೆಪಿಯ ಪ್ರಚಾರದ ತೆವಲಿಗೆ ಧ್ವಜದ ಘನತೆ ಬಲಿಯಾಗದಿರಲಿ ಎಂದಿದೆ.
ದೇಶದ ಆಸ್ತಿಗಳ ನಂತರ ಈಗ ರಾಷ್ಟ್ರಧ್ವಜದ ವ್ಯಾಪಾರಕ್ಕೂ ಬಿಜೆಪಿ ಇಳಿದಿದೆ. ರಾಷ್ಟ್ರಧ್ವಜ ಘನತೆಯನ್ನು ಬದಿಗೆ ಸರಿಸಿ ಮಾರಾಟದ ಸರಕನ್ನಾಗಿ ಮಾಡಿಕೊಂಡಿದೆ. ವಿರೂಪಗೊಂಡ ಧ್ವಜ ಮಾರುತ್ತಿರುವ ಬಿಜೆಪಿ 25 ರೂ. ನಿಗದಿಪಡಿಸಿದೆ. ರಸೀದಿ ನೀಡುತ್ತಿಲ್ಲ, ಧ್ವಜಗಳು ನಿಯಮಾನುಸಾರವಿಲ್ಲ. ವ್ಯಾಪಾರಕ್ಕೆ ರಾಷ್ಟ್ರಧ್ವಜವೇ ಬೇಕಿತ್ತೇ? ಎಂದು ಪ್ರಶ್ನಿಸಿದೆ.
ಪಕ್ಷದ ನಿಷ್ಠೆ, ಭಕ್ತಿ, ಪ್ರೀತಿ ಭಗವಾಧ್ವಜಕ್ಕೊ, ರಾಷ್ಟ್ರಧ್ವಜಕ್ಕೋ? ಮೊದಲು ಸ್ಪಷ್ಟಪಡಿಸಿ ತಮ್ಮ ನಕಲಿ ನಾಟಕ ಮುಂದುವರೆಸಲಿ. ಬಿಜೆಪಿಗೆ ನಿಜವಾಗಿಯೂ ತಿರಂಗಾಪ್ರೇಮ ಇದ್ದರೆ ಭಗವಾಧ್ವಜವನ್ನೇ ರಾಷ್ಟ್ರಧ್ವಜವನ್ನಾಗಿ ಬದಲಿಸುತ್ತೇವೆ ಎಂದ ಶಾಸಕರಾದ ಈಶ್ವರಪ್ಪ, ಹರೀಶ್ ಪೂಂಜಾರ ಮೇಲೆ ಯಾವ ಕ್ರಮ ಕೈಗೊಂಡಿದೆ ಹೇಳಲಿ ಎಂದು ಕಾಂಗ್ರೆಸ್ ಸವಾಲೆಸೆದಿದೆ.
ಬಿಜೆಪಿ ತಮ್ಮೊಳಗಿನ ತಿರಂಗಾ ದ್ವೇಷವನ್ನು ತೀರಿಸಿಕೊಳ್ಳಲೆಂದೇ ಧ್ವಜ ಸಂಹಿತೆಯನ್ನು ಬದಲಿಸಿ ರಾಷ್ಟ್ರಧ್ವಜದ ಘನತೆಯನ್ನು ಕುಗ್ಗಿಸುತ್ತಿವೆ. ಪ್ರಚಾರದ ಹುಚ್ಚಿಗಾಗಿ ಕಳಪೆ ಮತ್ತು ಹಾಳಾದ ಧ್ವಜಗಳನ್ನು ಮಾರಾಟ ಮಾಡಿದ್ದು ದೇಶಕ್ಕೆ ಎಸಗಿದ ಮಹಾನ್ ದ್ರೋಹ. ಒಳಗೆ ತಿರಂಗಾ ದ್ವೇಷ, ಹೊರಗೆ ನಾಟಕ ಮಾಡಿದರೆ ಇಂತವೇ ಸಂಭವಿಸುತ್ತವೆ ಎಂದು ಕುಹಕವಾಡಿದೆ.