ಹರಿಯಾಣ, ಆ 04 (DaijiworldNews/DB): ಸ್ಕೇಟ್ ಬೋರ್ಡ್ ಮೇಲೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆತೆರಳುತ್ತಿದ್ದ ಕೇರಳ ಮೂಲದ ಕ್ರೀಡಾಪಟುವೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ನಡೆದಿದೆ.
ಕೇರಳ ತಿರುವನಂತಪುರಂ ಮೂಲದ ಅನಾಸ್ ಅಜಾಸ್ ಮೃತಪಟ್ಟವರು. ಪಂಚಕುಲದ ಪಿಂಜೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಕೇಟ್ ಬೋರ್ಡ್ ಮೇಲೆ ತೆರಳುತ್ತಿದ್ದಾಗ ಅಪರಿಚಿತ ಟ್ರಕ್ ಒಂದು ಢಿಕ್ಕಿ ಹೊಡೆದಿದೆ. ಢಿಕ್ಕಿಯ ಬಳಿಕ ಟ್ರಕ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಸ್ಥಳೀಯರು ಸೇರಿ ಅನಾಸ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಅವರು ಸಾವನ್ನಪ್ಪಿದ್ದರು.
ಕಳೆದ ಮೇ 29ರಂದು ಇವರು ತಮ್ಮ ಪ್ರಯಾಣವನ್ನು ಕನ್ಯಾಕುಮಾರಿಯಿಂದ ಆರಂಭಿಸಿದ್ದರು. ಸ್ಕೇಟ್ ಬೋರ್ಡ್ ಮೇಲೆ ಕನ್ಯಾಕುಮಾರಿಯಿಂದ ಕಾಶ್ಮೀರವನ್ನು ತಲುಪುವುದು ಅವರ ಇಚ್ಚೆಯಾಗಿತ್ತು. ಒಟ್ಟು 3511 ಕಿಲೋ ಮೀಟರ್ ಕ್ರಮಿಸುವ ಗುರಿ ಅವರದಾಗಿತ್ತು. ಆದರೆ ನಿಗದಿತ ಗುರಿ ಮುಟ್ಟಲು ಇನ್ನೂ 600 ಕಿಲೋ ಮೀಟರ್ ಬಾಕಿ ಉಳಿದಿರುವಾಗಲೇ ಅವರು ಅಪಘಾತಕ್ಕೆ ಬಲಿಯಾಗಿದ್ದಾರೆ. ಪ್ರತಿದಿನ 40ರಿಂದ 50 ಕಿಲೋ ಮೀಟರ್ ಕ್ರಮಿಸುತ್ತಿದ್ದ ಅವರು ಮುಂದಿನ ಹದಿನೈದು ದಿನಗಳಲ್ಲಿ ಕಾಶ್ಮೀರ ತಲುಪುವುದಾಗಿ ಕೊನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.