ಬೆಂಗಳೂರು, ಜು 30 (DaijiworldNews/DB): ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಸಬಹುದಿತ್ತು ಎಂದು ಹೇಳಿ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ ಅವರ ಬೆಂಗಳೂರಿನ ನಿವಾಸದ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಕಲ್ಲು ಕೊಟ್ಟು ಹೊಡೆಸುವಂತೆ ಸವಾಲೆಸೆಯುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ತಳ್ಳಾಟ, ನೂಕಾಟ ನಡೆಯಿತು.
ಪ್ರತಿಭಟನಾಕಾರರು ಕಲ್ಲು ಮತ್ತು ಹೂಗಳೊಂದಿಗೆ ಸಂಸದ ತೇಜಸ್ವಿ ಸೂರ್ಯ ಅವರ ಮನೆಗೆ ಮೆರವಣಿಗೆ ಹೊರಟಿದ್ದರು. ಕಲ್ಲು ನೀಡಿ ಹೊಡೆಸುವ ಸವಾಲು ಹಾಕಲು ಮತ್ತು ಕಲ್ಲು ಹೊಡೆಯುವ ಮನಸ್ಥಿತಿ ಬೇಡ ಎಂದು ತಿಳಿ ಹೇಳಲು ಹೂಗಳನ್ನು ಉಡುಗೊರೆ ನೀಡಲು ಒಯ್ದಿದ್ದರು. ಆದರೆ ಅರ್ಧ ದಾರಿಯಲ್ಲೇ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದುಕೊಂಡರು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ತಳ್ಳಾಟ, ನೂಕಾಟವೂ ನಡೆಯಿತು.
ಬಳಿಕ ಕಾಂಗ್ರೆಸ್ ಕಾರ್ಯಕರ್ತೆ ಮೀನಾ ಅವರು ಸಂಸದರ ಮನೆಯೊಳಗೆ ಪ್ರವೇಶಿಸಿ ಹೂಗಳನ್ನು ಇಟ್ಟು ಹೊರ ಬಂದಿದ್ದಾರೆ. ಆಕೆ ಹೊರ ಬರುತ್ತಿದ್ದಂತೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದರು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೀನಾ, ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಸಬಹುದಿತ್ತು ಎನ್ನುವ ಮೂಲಕ ಸಂಸದರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ನಮಗವರು ಕಲ್ಲು ಹೊಡೆದರೂ ಪರವಾಗಿಲ್ಲ. ನಾವು ಹೂಗಳನ್ನು ಅವರಿಗೆ ನೀಡುತ್ತೇವೆ ಎಂದರು.