ಬೆಂಗಳೂರು, ಜು 28 (DaijiworldNews/DB): ಪ್ರಗತಿಪರ, ಉದ್ಯಮ ಸೃಷ್ಟಿ, ಎಲ್ಲಾ ವರ್ಗದ ಜನರಿಗೆ ಸಮಗ್ರ ಯೋಜನೆ ಮೂಲಕ ಜನಪರವಾಗಿ ಸರ್ಕಾರ ತೊಡಗಿಸಿಕೊಂಡಿದೆ. ರಾಜ್ಯದ ಆರ್ಥಿಕತೆ ಹೆಚ್ಚಿಸಿ ಎಲ್ಲಾ ವರ್ಗಕ್ಕೂ ಅದರ ಲಾಭ ನೀಡುವ ಪ್ರಯತ್ನ ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 3 ವರ್ಷವಾದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ವರದಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಗುರುವಾರ ಮಾತನಾಡಿದರು. ಈ ಸಂಬಂಧ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಜನೋತ್ಸವ ಕಾರ್ಯಕ್ರಮ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರದ್ದಾಗಿತ್ತು.
ಯೋಜನಾಬದ್ದ ಅಭಿವೃದ್ದಿಗೆ ನಮ್ಮ ಸರ್ಕಾರ ಗಮನ ನೀಡಿದೆ. 25 ಲಕ್ಷ ಪರಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ 900 ಕೋಟಿ ರೂ. ವೆಚ್ಚದಲ್ಲಿ 75 ಯುನಿಟ್ ಉಚಿತ ವಿದ್ಯುತ್ ನೀಡುವ ಕೆಲಸ ಇಂದಿನಿಂದ ಪ್ರಾರಂಭವಾಗಲಿದ್ದು, ಒಂದೂವರೆ ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ. 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಸ್ತ್ರೀಯರಿಗೆ ಸ್ವ ಉದ್ಯೋಗಕ್ಕಾಗಿ 1.5 ಲಕ್ಷ ರೂ. ಸಾಲ ನೀಡುವ ಯೋಜನೆ ಕಾರ್ಯಗತಗೊಳ್ಳಲಿದೆ. ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಎಂಬ ವಿಶೇಷ ಯೋಜನೆಯೊಂದನ್ನು ಜಾರಿಗೊಳಿಸಲಾಗುತ್ತಿದೆ. 28 ಸಾವಿರ ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ಮಾದರಿಯಲ್ಲಿ ಸ್ವಾಮಿ ವಿವೇಕಾನಂದ ಸಂಘ ಮಾಡಿ 5 ಲಕ್ಷ ಯುವಕರಿಗೆ ಸ್ವ ಉದ್ಯೋಗ ತರಬೇತಿ ನೀಡುವ ಯೋಜನೆಯಿದೆ. ಇದಕ್ಕಾಗಿ ಆರ್ಥಿಕ ನೆರವನ್ನೂ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಪುಣ್ಯಕೋಟಿ ಯೋಜನೆಯಡಿ ಗೋವುಗಳ ದತ್ತು ಸ್ವೀಕಾರ ನಡೆಯಲಿದೆ. ಆಸಕ್ತರು ಗೋವುಗಳನ್ನು ದತ್ತು ಪಡೆದುಕೊಳ್ಳಬಹುದು. ಇಲ್ಲವೇ ವಾರ್ಷಿಕ 11 ಸಾವಿರ ರೂ.ಗಳನ್ನು ದತ್ತು ತೆಗೆದುಕೊಂಡ ಗೋವುಗಳ ನಿರ್ವಹಣೆಗಾಗಿ ನೀಡಬಹುದು. ಈ ಮೊತ್ತವನ್ನು ಗೋಶಾಲೆಗಳಲ್ಲಿರುವ ದತ್ತು ಪಡೆದುಕೊಂಡ ಗೋವುಗಳ ನಿರ್ವಹಣೆಗೆ ಉಪಯೋಗಿಸಲಾಗುವುದು. ರೈತರ ಮಕ್ಕಳಿಗೆ ನೀಡುತ್ತಿರುವ ವಿದ್ಯಾನಿಧಿ ಯೋಜನೆಯನ್ನು ನೇಕಾರರ ಮಕ್ಕಳು, ಟ್ಯಾಕ್ಸಿ ಚಾಲಕರ ಮಕ್ಕಳು ಹಾಗೂ ಮೀನುಗಾರರ ಮಕ್ಕಳಿಗೂ ವಿಸ್ತರಿಸಲಾಗಿದೆ. ಇದಲ್ಲದೆ ಹಲವಾರು ಅಭಿವೃದ್ದಿ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದ್ದು, ಸಕಾಲಕ್ಕೆ ಅದರ ಲಾಭವನ್ನು ಜನಸಾಮಾನ್ಯರಿಗೆ ನೀಡಲಾಗುವುದು ಎಂದರು.
ಸರ್ಕಾರದ ಸಾಧನೆಗಳನ್ನು ಜನಮಾನಸಕ್ಕೆ ತಲುಪಿಸುವುದು ನಮ್ಮ ಕರ್ತವ್ಯ. ಸರ್ಕಾರ ನಡೆಸಲು ಅವಕಾಶ ನೀಡಿದ ವರಿಷ್ಠರಿಗೆ ಧನ್ಯವಾದ ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ಹೇಳಿದರು.