ಬೆಂಗಳೂರು, ಜು 28 (DaijiworldNews/DB): ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಅಲ್ಲಿನ ಮುಖ್ಯಮಂತ್ರಿಗಳು ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಅದನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಲಾಗುವುದಿಲ್ಲ. ಅಂತಹ ಪ್ರಸಂಗ ಬಂದಲ್ಲಿ ಉತ್ತರ ಪ್ರದೇಶ ಮಾಡದರಿಯಲ್ಲೇ ರಾಜ್ಯದಲ್ಲಿ ಕ್ರಮ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ಕರ್ನಾಟಕಕ್ಕೆ ಯೋಗಿ ಮಾದರಿಯ ಸಿಎಂ ಬೇಕೆಂಬ ಕಾರ್ಯಕರ್ತರ ಬೇಡಿಕೆ ಕುರಿತ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕೆಲವು ಶಕ್ತಿಗಳು ದುರ್ಘಟನೆಗಳನ್ನು ಸೃಷ್ಟಿ ಮಾಡಲೆಂದೇ ಇರುತ್ತಾರೆ. ಹಿಜಾಬ್ ವಿಚಾರದಲ್ಲಿ ಐವರಿಂದ ಶುರುವಾದ ವಿವಾದ ಇಡೀ ರಾಜ್ಯಕ್ಕೆ ಹಬ್ಬಿ ಬಳಿಕ ಕಾನೂನಿನ ಮುಖಾಂತರ ತಿಳಿ ಹೇಳಿದ ನಂತರ ಸದ್ಯ ಎಲ್ಲರೂ ಕಾನೂನು ಪಾಲಿಸುತ್ತಿದ್ದಾರೆ. ಆಝಾನ್ ವಿಚಾರದಲ್ಲಿಯೂ ಇದೇ ಆಗಿದೆ ಎಂದರು.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರ ಐದು ತಂಡಗಳನ್ನು ಮಾಡಲಾಗಿದೆ. ಕೇರಳಕ್ಕೆ ಪೊಲೀಸರ ತಂಡವನ್ನು ಕಳುಹಿಸಲಾಗಿದೆ. ಕಾನೂನು ಸುವ್ಯವಸ್ಥೆಯಲ್ಲಿ ಯಾವುದೇ ರಾಜಿ ಮಾಡುವುದಿಲ್ಲ. ದುಷ್ಟಶಕ್ತಿಗಳ ವಿರುದ್ದ ಹೋರಾಡುವುದಕ್ಕೆ ಸರ್ಕಾರ ಸದಾ ಬದ್ದ ಎಂದು ಅವರು ತಿಳಿಸಿದರು.
ಕಠಿಣ ಕ್ರಮದ ಸರ್ಕಾರ ಎಂದು ಪಕ್ಷದ ಕಾರ್ಯಕರ್ತರೇ ಲೇವಡಿ ಮಾಡುತ್ತಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಹರ್ಷ ಕೊಲೆ ವಿಚಾರದಲ್ಲಿ 24 ಗಂಟೆಯೊಳಗೆ ಆರೋಪಿಗಳ ಬಂಧನವಾಗಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆಯಾದಾಗಲೂ ಕ್ರಮ ಕ್ಷಿಪ್ರವಾಗಿ ಆಗಿದೆ. ಪಾಂಡವಪುರ ಘಟನೆ ವೇಳೆ ಖುದ್ದಾಗಿ ನಾನೇ ಹೋಗಿ ಕ್ರಮಕ್ಕೆ ವ್ಯವಸ್ಥೆ ಮಾಡಿದ್ದೇನೆ. ರಾಜ್ಯದಲ್ಲಿ ದುಷ್ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಭಯೋತ್ಪಾದಕರನ್ನು ತಿಹಾರ್ ಜೈಲಿಗೆ ಕಳುಹಿಸುವ ಕೆಲಸ ನಿರಂತರ ನಡೆಯುತ್ತಿದೆ ಎಂದರು.
ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವುದು ಕೇಂದ್ರ ಸರ್ಕಾರದ ಕೆಲಸ. ಈ ಸಂಬಂಧ ನಾವು ನೀಡಬೇಕಾದ ಎಲ್ಲಾ ವರದಿಗಳನ್ನು ಕೇಂದ್ರಕ್ಕೆ ನೀಡಿದ್ದೇವೆ. ಶೀಘ್ರ ಕೇಂದ್ರದ ನಿರ್ಣಯ ಹೊರ ಬೀಳಬಹುದು ಎಂದು ಪ್ರಶ್ನೆಯೊಂದಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದರು.