ಬೆಂಗಳೂರು, ಜು 28 (DaijiworldNews/DB): ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬದ ಅಮೃತ ಮಹೋತ್ಸವವನ್ನು ಪಕ್ಷದ ಕಾರ್ಯಕ್ರಮವನ್ನಾಗಿ ಯೋಜಿಸಲಾಗುವುದೆಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇದೀಗ ಅದೊಂದು ಖಾಸಗಿ ಕಾರ್ಯಕ್ರಮ ಎಂದಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಬಣಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೌನ ಪ್ರತಿಭಟನೆ ಇಂದಿಗೆ ಕೊನೆಯಾಗುತ್ತಿದೆ. ಆಗಸ್ಟ್ 15ರಂದು ದೊಡ್ಡ ಜವಾಬ್ದಾರಿ ನಿರ್ವಹಿಸಬೇಕಿದೆ. ಸಂಘ ಸಂಸ್ಥೆ, ವಿದ್ಯಾರ್ಥಿ, ಕಾರ್ಯಕರ್ತರ ನೋಂದಣಿ ಮಾಡಿಸಬೇಕು. 3ನೇ ತಾರೀಖು ಖಾಸಗಿ ಕಾರ್ಯಕ್ರಮವಿದ್ದು, ಅದು ಅಭಿಮಾನಿಗಳ ಕಾರ್ಯಕ್ರಮ. 15ನೇ ತಾರೀಕಿಗೆ ರಾಷ್ಟ್ರ ಕಾರ್ಯಕ್ರಮ ನಡೆಯಲಿದೆ ಎಂದರು. ಸಿದ್ದರಾಮೋತ್ಸವವನ್ನು ಈವರೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎನ್ನುತ್ತಿದ್ದ ಡಿ.ಕೆ. ಶಿವಕುಮಾರ್ ಸಿದ್ದರಾಮೋತ್ಸವ ನಡೆಯುವ 3ನೇ ತಾರೀಕಿನಂದು ಖಾಸಗಿ ಕಾರ್ಯಕ್ರಮವಿದೆ ಎನ್ನುವ ಮೂಲಕ ಸಿದ್ದರಾಮಯ್ಯ ಬಣಕ್ಕೆ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗ ಜಮೀರ್ ಅವರ ನಡೆಯಿಂದ ಬೇಸತ್ತು ಶಿವಕುಮಾರ್ ಈ ರೀತಿ ಹೇಳಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ ಎಂದು ವರದಿಯಾಗಿದೆ.
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಇ.ಡಿ ತನಿಖೆ ಮಕ್ತಾಯವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ನಿನ್ನೆಯಿಂದ ನಡೆಸುತ್ತಿದ್ದ ಮೌನ ಪ್ರತಿಭಟನೆ ಇಂದು ಸಮಾಪ್ತಿಗೊಂಡಿತು.