ನವದೆಹಲಿ, ಜು 26 (DaijiworldNews/DB): ಗದ್ದಲ ಸೃಷ್ಟಿಸಿ ರಾಜ್ಯಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಿಪಕ್ಷಗಳ 19 ಮಂದಿ ಸಂಸದರನ್ನು ಒಂದು ವಾರದ ಮಟ್ಟಿಗೆ ಅಮಾನತು ಮಾಡಲಾಗಿದೆ.
ತೃಣಮೂಲ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್, ಡಾ. ಶಂತನು ಸೇನ್, ಡೊಲಾ ಸೇನ್ ಸೇರಿದಂತೆ 19 ಮಂದಿ ಸಂಸದರು ಅಮಾನತಾಗಿದ್ದಾರೆ.
ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಿರುವುದನ್ನು ಮತ್ತು ಬೆಲೆ ಏರಿಕೆಯನ್ನು ಖಂಡಿಸಿ ವಿಪಕ್ಷಗಳು ಪ್ರತಿಭಟಿಸಿದ್ದವು. ಹೀಗಾಗಿ ಮಧ್ಯಾಹ್ನಕ್ಕೂ ಮೊದಲು ಎರಡು ಬಾರಿ ಕಲಾಪ ಮುಂದೂಡಲಾಯಿತು. ಈ ನಡುವೆ ಸಭಾಧ್ಯಕ್ಷರು ಎಚ್ಚರಿಕೆ ನೀಡಿದ್ದರೂ, ವಿಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರ ಪೀಠದೆದುರು ಘೋಷಣೆ ಕೂಗಿ, ಕರಪತ್ರ ಪ್ರದರ್ಶಿಸಿ ಅಶಿಸ್ತಿನ ನಡವಳಿಕ ತೋರಿದ ಕಾರಣಕ್ಕಾಗಿ ಸಭಾಧ್ಯಕ್ಷರು 19 ಮಂದಿ ಸಂಸದರನ್ನು ಒಂದು ವಾರದ ಮಟ್ಟಿಗೆ ಅಮಾನತು ಮಾಡಿ ಆದೇಶಿಸಿದರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಎಚ್ಚರಿಕೆ ಮೀರಿ ಕರಪತ್ರ ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ ನಾಲ್ಕು ಮಂದಿ ಕಾಂಗ್ರೆಸ್ ಸಂಸದರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಸೋಮವಾರ ಅಮಾನತು ಮಾಡಿ ಆದೇಶಿಸಲಾಗಿತ್ತು.