ಬೆಂಗಳೂರು, ಜು 26 (DaijiworldNews/DB): ಬಿಜೆಪಿಯ ಐಟಿ, ಇಡಿ ಮೋರ್ಚಾಗಳು 'ವಾಷಿಂಗ್ ಪೌಡರ್ ನಿರ್ಮಾ' ಹಾಗೂ 'ಕೊಳಚೆ ನೀರು' ಎಂಬ ದ್ವಿಪಾತ್ರ ನಿರ್ವಹಿಸುತ್ತವೆ. ಬಿಜೆಪಿಗೆ ಬೇಕಾದವರನ್ನ ಸ್ವಚ್ಛಗೊಳಿಸಲು ನಿರ್ಮಾದಂತೆ & ಬಿಜೆಪಿಗೆ ಅಗದವರ ಶುಭ್ರ ವಸ್ತ್ರಕ್ಕೆ ಎರಚಲು ಕೊಳಚೆ ನೀರಿನಂತೆ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿ ಅದೆಷ್ಟೇ ಯತ್ನಿಸಿದರೂ ಶುಭ್ರ ಚರಿತ್ರೆಯ ಸೋನಿಯಾ ಗಾಂಧಿಯವರಿಗೆ ಮಸಿ ಬಳಿಯಲಾಗದು ಎಂದು ತಿಳಿಸಿದೆ.
ಐಟಿ, ಇಡಿ, ಸಿಬಿಐ ಸಂಸ್ಥೆಗಳು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ವಿಪಕ್ಷ ನಾಯಕರ ಮೇಲೆ ಮುಗಿಬೀಳುತ್ತಿರುವ ಇಡಿ, ಎಂಟು ವರ್ಷಗಳಲ್ಲಿ ಎಂದಾದರೂ ಬಿಜೆಪಿ ನಾಯಕರನ್ನು ವಿಚಾರಣೆ ನಡೆಸಿದೆಯೇ? ಇವುಗಳು ನಿಜಕ್ಕೂ ಸ್ವತಂತ್ರ ಸಂಸ್ಥೆಗಳಾಗಿದ್ದರೆ, ಆಶ್ಚರ್ಯಕರವಾಗಿ ಬೆಳೆದ ಜಯ್ ಶಾ ಅವರ ಆದಾಯದ ಮೂಲವನ್ನು ಹುಡುಕಲಿಲ್ಲ ಏಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
500 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ತಮ್ಮ ಮಗಳ ಮದುವೆ ಮಾಡಿದ ಜನಾರ್ದನ ರೆಡ್ಡಿ ಅವರ ಹಣದ ಮೂಲ ಯಾವುದೆಂದು ಕೇಳಲಿಲ್ಲವೇಕೆ?ಸಿಎಂ ಹುದ್ದೆ ಸಿಗಬೇಕಾದರೆ 2,500 ಕೋಟಿ ರೂ. ಹಣ ಕೊಡಬೇಕಾಗುತ್ತದೆ ಎಂದು ಅವರದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದರು. ಈ ಹೇಳಿಕೆಯ ಬೆನ್ನು ಬೀಳಲಿಲ್ಲವೇಕೆ? ಎಂದು ಸ್ವತಂತ್ರ ಸಂಸ್ಥೆಗಳನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿ, ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ, ಹಿಂಬಾಗಿಲಿನಿಂದ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಿತು, ಆಪರೇಷನ್ ಕಮಲದ 1000 ಕೋಟಿ ರೂ. ವ್ಯವಹಾರ ಕೇಳಲಿಲ್ಲವೇಕೆ? ಅದಾನಿ ಪೋರ್ಟ್ನಲ್ಲಿ ಹಲವು ಬಾರಿ ದೊಡ್ಡ ಮೊತ್ತದ ಡ್ರಗ್ಸ್ ದಂಧೆ ನಡೆದಿರುವ ವರದಿ ಮಾಧ್ಯಗಳಲ್ಲೇ ಪ್ರಕಟವಾಗಿವೆ, ಹಾಗಿದ್ದರೂ ಡ್ರಗ್ಸ್ ಪ್ರಕರಣದ ತನಿಖೆ ಮಾಡಲಿಲ್ಲ ಏಕೆ? ಇತ್ತೀಚಿಗೆ ಆಪರೇಷನ್ ಕಮಲಕ್ಕೊಳಪಟ್ಟ ಮುಂಬೈ ಶಾಸಕರ ಮೇಲೆ ಕೊಟ್ಯಂತರ ರೂಪಾಯಿ ಹಣ ವೆಚ್ಚ ಮಾಡಲಾಗಿದೆ, ಈ ಹಣದ ಮೂಲ ಹುಡುಕಲಿಲ್ಲ ಏಕೆ? ಎಂದು ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಎಸೆದಿದೆ.
ಕರ್ನಾಟಕಲ್ಲಿ ಮಂತ್ರಿ ಪದವಿ 50 ರಿಂದ 60 ಕೋಟಿ ರೂ.ಗಳಿಗೆ ಮಾರಾಟವಾಗುತ್ತಿವೆ ಎಂಬ ವಿಚಾರದ ತನಿಖೆ ನಡೆಸಲಿಲ್ಲ ಏಕೆ? ಎಂದು ಕಾಂಗ್ರೆಸ್ ಕೇಳಿದೆ.